ಸಿದ್ದರಾಮಯ್ಯ ರಾತ್ರಿ ಸೀಕ್ರೆಟ್ ನ್ನು ಅವರ ಮನೆ ಕೆಲಸದವರೇ ಹೇಳ್ತಾರೆ: ಎಚ್ ಡಿ ಕುಮಾರಸ್ವಾಮಿ

Krishnaveni K

ಶನಿವಾರ, 28 ಸೆಪ್ಟಂಬರ್ 2024 (13:28 IST)
ಬೆಂಗಳೂರು: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹೆದರಿ ರಾತ್ರಿಯೆಲ್ಲಾ ನಿದ್ರೆಗೆಟ್ಟು ಕೂತಿದ್ದರು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮುಡಾ ಹಗರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ. ನಾನು ಯಾರಿಗೂ ಹೆದರಲ್ಲ ಎಂದು ಬಾಯಿ ಮಾತಿನಲ್ಲಿ ಹೇಳ್ತಾರೆ. ಆದರೆ ಪಾಪ ಅವರ ಮನೆ ಕೆಲಸದವರೇ ಹೇಳ್ತಾರೆ. ಸಾಹೇಬ್ರು ರಾತ್ರಿಯೆಲ್ಲಾ ನಿದ್ರೆಗೆಟ್ಟು ಕೂತಿದ್ದರು. ಮಧ್ಯರಾತ್ರಿ ದಿಗ್ಗನೆ ಎದ್ದು ಕೂತ್ಕೊಂಡ್ರು, ಡಾಕ್ಟರನ್ನೆಲ್ಲಾ ಕರೆಸಿಕೊಂಡ್ರು. ಬಳಿಕ ಡಾಕ್ಟರಿಗೂ ನೀವು ಎಲ್ಲೂ ಹೋಗಬೇಡಿ ಎಂದು ಹೇಳಿದ್ದರು ಎಂದು ಕುಮಾರಸ್ವಾಮಿ ನಗುತ್ತಾ ಹೇಳಿದ್ದಾರೆ.

ನಾನು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳ್ತಾರಲ್ಲ. ನಾನೇನು ತಪ್ಪು ಮಾಡಿದ್ದೀನಿ. ನನ್ನ ಮೇಲೆ ಏನು ಕೇಸ್ ಇದೆ ಹೇಳಲಿ ನೋಡೋಣ. ಗಂಗೇನಹಳ್ಳಿ ಕೇಸ್ ನಲ್ಲಿ ನನ್ನ ಪಾತ್ರವೇನು? ದಾಖಲೆಗಳು ನಿಮ್ಮ ಮುಂದೆ ಇದೆ. ಕುಮಾರಸ್ವಾಮಿ ಏನು ನಿರ್ಧಾರ ತೆಗೆದುಕೊಂಡಿದ್ದರು ಎಂಬ ದಾಖಲೆಗಳೂ ಇವೆ. ಹೌದು, ನಾನು ಸಹಿ ಹಾಕಿದ್ದೆ. ಸಾವಿರಾರು ಅರ್ಜಿಗಳು ನನ್ನ ಮುಂದೆ ಬರುತ್ತವೆ. ಅದನ್ನು ವಿಲೇವಾರಿ ಮಾಡಿ ಎಂದು ಸಹಿ ಹಾಕಿ ಆಯಾ ಇಲಾಖೆಗೆ ಕಳುಹಿಸುತ್ತೇವೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿ ಈಗಾಗಲೇ ಲೋಕಾಯುಕ್ತ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ಅದರ ಬೆನ್ನಲ್ಲೇ ಇಂದು ಅವರು ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ