ದೇಶಾದ್ಯಂತ ರಾಜಕೀಯ ಪಕ್ಷಗಳು, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ತಳಮಟ್ಟಲ್ಲಿ ಮಾತ್ರ ಇನ್ನೂ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಉದಾಹರಣೆಗೆ ಕರ್ನಾಟಕವನ್ನು ತೆಗೆದುಕೊಂಡರೆ 2015-16ರಿಂದೀಚೆಗೆ ರಾಜ್ಯದಲ್ಲಿ 7463 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2010-2015ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ (744)ಗೆ ಹೋಲಿಸಿದರೆ ಇದು ಹತ್ತು ಪಟ್ಟು ಅಧಿಕ ಎಂದು "ಟೈಮ್ಸ್ ಆಫ್ ಇಂಡಿಯಾ" ವರದಿ ಮಾಡಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಸ್ಥಿತಿ ಉಲ್ಬಣಿಸಿದ್ದು ಕರ್ನಾಟಕದಲ್ಲಿ ಸಾವಿರಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟು ಸಾಲದೆಂಬಂತೆ ಕರ್ನಾಟಕ ಸರ್ಕಾರ ಮೃತರ ಕುಟುಂಬಗಳಿಗೆ ನ್ಯಾಯಸಮ್ಮತ ಪರಿಹಾರವನ್ನು ವಿತರಿಸುವಲ್ಲಿ ಕೂಡಾ ವಿಫಲವಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 2010-11ರಿಂದೀಚೆಗೆ 8207 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪರಿಹಾರ ಸಿಕ್ಕಿರುವುದು 5756 ರೈತರ ಕುಟುಂಬಗಳಿಗೆ ಮಾತ್ರ.
ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಭೀಮನಗೌಡ ಜಿ.ಪರಗೊಂಡ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಈ ಅಂಶ ಬಹಿರಂಗವಾಗಿದೆ. ನಿರಂತರ ಬರ ಪರಿಸ್ಥಿತಿ, ಪ್ರವಾಹ ಪರಿಸ್ಥಿತಿ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಹಲವು ಮಂದಿ ರೈತರು ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಯದಿಂದ ಹತಾಶೆಗೊಂಡು ನಿರೀಕ್ಷಿತ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದರ ಜತೆಗೆ 2000ಕ್ಕೂ ಹೆಚ್ಚು ಮೃತ ರೈತರ ಕುಟುಂಬಗಳಿಗೆ ಪರಿಹಾರ ನಿರಾಕರಿಸಲಾಗಿದೆ. 407 ಮೃತ ರೈತರ ಕ್ಲೇಮ್ಗಳಿಗೆ ಸರ್ಕಾರದ ಅನುಮೋದನೆ ದೊರಕಿದ್ದರೂ ಈ ಕುಟುಂಬಗಳಿಗೆ ಸರ್ಕಾರ ಇನ್ನೂ ಪರಿಹಾರ ವಿತರಿಸಬೇಕಿದೆ. ಕೆಲ ರೈತರ ಆತ್ಮಹತ್ಯೆ ಕೃಷಿ ಸಂಬಂಧಿತ ಕಾರಣಗಳಿಗೆ ಅಲ್ಲ. ಆದ್ದರಿಂದ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.