ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ‌ಯಿಂದ ಅಭಿಷೇಕ

ಶುಕ್ರವಾರ, 14 ಜನವರಿ 2022 (19:57 IST)
ಬೆಂಗಳೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡಿದೆ. ನಗರದ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆ ನಡೆಯಿತು. ಪ್ರತಿ ವರ್ಷದಂತೆ ಗವಿಗಂಗಾಧರನಿಗೆ ಸೂರ್ಯರಶ್ಮಿಯ ಸ್ಪರ್ಶವು ಸಹ ಆಗುತ್ತಿದೆ.
ಇಂದು ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಹೀಗಾಗಿ ಸೂರ್ಯನ ಶಿವನಿಗೆ ಪೂಜೆ ಸಲ್ಲಿಸೋ ಮೂಲಕ ಪಥ ಬದಲಿಸ್ತಾನೆ. ಇಂದು ಆ ಕೌತುಕ ಘಟಿಸಿ ರವಿ ತನ್ನ ಹಾದಿ ಬದಲಿಸಿ ಉತ್ತರಾಯಣ ಪ್ರವೇಶ ಮಾಡಿದ್ದಾನೆ. ಕಳೆದ ವರ್ಷ ಮೋಡ ಹೆಚ್ಚಾಗಿದ್ದ ಹಿನ್ನೆಲೆ, ಗವಿ ಗಂಗಾಧರನಿಗೆ ಸೂರ್ಯ ರಶ್ಮಿಯು ಸ್ಪರ್ಶಿಸಲಿಲ್ಲ. ಇಷ್ಟು ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬಿದ್ದಿರಲಿಲ್ಲ. ಹೀಗಾಗಿ ಭಕ್ತಾದಿಗಳಲ್ಲಿ ಆತಂಕ ಮೂಡಿತ್ತು. ಹಾಗೂ ಈ ಕೌತುಕ ಕಣ್ತುಂಬಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಪಥವನ್ನು ಬದಲಿಸುವ ದಿನ, ಈ ದಿನ ಸೂರ್ಯನು ಶಿವನಿಗೆ ಪೂಜಿಸಿ ತನ್ನ ಪಥವನ್ನು ಬದಲಿಸುತ್ತೇನೆ ಅನ್ನೋ ಪ್ರತೀತಿ ಇರೋದ್ರಿಂದ, ಇವತ್ತು ಗವಿ ಗಂಗಾಧರನನ್ನು ಸೂರ್ಯ ರಶ್ಮಿ ಸ್ಪರ್ಶಿಸಿತು. 
ಸಂಜೆ 5:17ಕ್ಕೆ ಸರಿಯಾಗಿ ಶಿವಲಿಂಗ ಮುಂಭಾಗದಲ್ಲಿರುವ ನಂದಿಕಾಳಿಗೆ ಸ್ಪರ್ಶಿಸಲು ಶುರುವಾದ ಸೂರ್ಯ ರಶ್ಮಿಗಳು. ನಂತರ ನಂದಿವಾಹನವನ್ನು ಆವರಿಸುತ್ತಾ ಶಿವಲಿಂಗದ ಸೋಮಸೂತ್ರಕ್ಕೆ ಸೂರ್ಯ ಕಿರಣಗಳು ಸ್ಪರ್ಶಿಸಿತು. ಅದಾಗಿ ದಕ್ಷಿಣದಿಂದ ಉತ್ತರಕ್ಕೆ ಸಾಗುತ್ತಿದ್ದ ರವಿ ಕಿರಣಗಳು ಕ್ರಮೇಣ ಒಂದು ವರ್ಷದ ಬಳಿಕ ಶಿವನ ಶಿರ ಸ್ಪರ್ಶಿಸಿತು. ಒಟ್ಟಾರೆ 13 ನಿಮಿಷಗಳ ಕಾಲ ಸೂರ್ಯ ರಶ್ಮಿ ಸ್ಪರ್ಶಿಸಿದರೂ ಪಾಣಿಪೀಠದಿಂದ ಶಿವಲಿಂಗದ ಶಿರದವರೆಗೆ 2 ನಿಮಿಷ 13 ಸೆಕೆಂಡ್ ಗಳ ಕಾಲ ರಶ್ಮಿಗಳು ಆವರಿಸಿ ಕೂತಿತ್ತು. ಬಳಿಕ ಮಾತನಾಡಿದ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕರು ಸೋಮಸುಂದರ್ ದೀಕ್ಷಿತ್ ಮಾತನಾಡಿ, ವರ್ಷದ ಬಳಿಕ ಸೂರ್ಯ ಸ್ಪರ್ಶವಾಗಿದೆ. ಇದು ಶುಭದ ಸಂಕೇತ. ಕಳೆದ ಬಾರಿ ಸೂರ್ಯ ಕಿರಣಗಳು ಸ್ಪರ್ಶವಾಗಿರುವುದು ನೋಡಲಿಲ್ಲ. ಆ ಮೇಲೆ ಏನೇನಾಯ್ತು ಎಲ್ಲರಿಗೂ ಗೊತ್ತಿದೆ. ಆದರೆ ಈಬಾರಿ ಶುಭದ ಸಂಕೇತ ಸಿಕ್ಕಿದೆ. ಎಲ್ಲವೂ ನಿರುಮ್ಮುಳವಾಗಿ ಬದುಕು ಬಂಗಾರ ಎಂದು ಹೇಳಿದ್ದಾರೆ.
ಈ ಬಾರಿ ಕೋವಿಡ್ ಇದ್ದ ಕಾರಣ ಮುಂಜಾನೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಜನರಿಗೆ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸೂರ್ಯ ರಶ್ಮಿ ಬಂದ ಬಳಿಕವೂ ಯಾವ ಭಕ್ತರಿಗೆ ದೇವಾಲಯಕ್ಕೆ ದರ್ಶನಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊರೊನಾ ಏರಿಕೆಯಾಗುತ್ತಿರುವ ದೇವಾಲಯದ ಹೊರಾಂಗಣದಲ್ಲಿಯೂ ಭಕ್ತರಿಗೆ ಅನುಮತಿ ಇರಲಿಲ್ಲ. ಹೀಗಾಗಿ ಭಕ್ತರ ಉದ್ಘೋಷವಿಲ್ಲದೆ ಸೂರ್ಯ ರಶ್ಮಿ ಮಹಾದೇವನಿಗೆ ನಮಿಸಿ ತನ್ನ ಪಥ ಬದಲಿಸಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ