ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಬನಶಂಕರಿಯಲ್ಲಿರುವ ಬ್ರಾಹ್ಮಣ ಪ್ರಸಾದ ಭೋಜನಮ್ ಸ್ಟ್ರೀಟ್ ಫುಡ್ ಅಂಗಡಿಯಲ್ಲಿ ರಸ್ತೆ ಬದಿ ನಿಂತುಕೊಂಡು ತಿಂಡಿಯ ಸವಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬೆಳಗ್ಗಿನ ಹೊತ್ತು ವಾಯು ವಿಹಾರ ಮಾಡುವಾಗ ಅನೇಕ ಬಾರಿ ಜನರೊಂದಿಗೆ ಬೆರೆತಿದ್ದು ಇದೆ. ಇದೀಗ ಬನಶಂಕರಿಯಲ್ಲಿರುವ ಪಕ್ಕಾ ಬ್ರಾಹ್ಮಿಣ್ ಶೈಲಿಯ ಆಹಾರ ಸಿಗುವ ಬ್ರಾಹ್ಮಣ ಪ್ರಸಾದ ಭೋಜನಮ್ ನಲ್ಲಿ ತಿಂಡಿ ಸವಿದಿದ್ದಾರೆ.
ಇಲ್ಲಿ ಪ್ರಸಾದದ ರೀತಿಯಲ್ಲಿ ದೊನ್ನೆಯಲ್ಲಿ ಯಾವುದೇ ರಾಸಾಯನಿಕ ಬಳಸದ ಆಹಾರ ವಸ್ತುಗಳು ಸಿಗುತ್ತವೆ. ಬೀದಿ ಬದಿ ಆಹಾರಗಳಲ್ಲಿ ಬೆಂಗಳೂರಿನಲ್ಲಿ ಈ ಸ್ಟಾಲ್ ಗೆ ವಿಶೇಷ ಹೆಸರಿದೆ. ರಸ್ತೆ ಬದಿ ಮಾರುವ ಈ ಸ್ಟಾಲ್ ಗೆ ಸಾಕಷ್ಟು ಜನ ಬಂದು ತಿಂಡಿ ಚಪ್ಪರಿಸುತ್ತಾರೆ.
ಇದೀಗ ತೇಜಸ್ವಿ ಸೂರ್ಯ ಬೀದಿ ಬದಿ ಆಹಾರ ಸೇವಿಸುತ್ತಾ ಸಖತ್ ಆಗಿದೆ ಎಂದು ಚಪ್ಪರಿಸುತ್ತಿರುವ ವಿಡಿಯೋ ನೋಡಿದ ನೆಟ್ಟಿಗರು, ಬ್ರಾಹ್ಮಣರ ಭೋಜನ ಎಂಬ ಕಾರಣಕ್ಕೆ ಅದು ಎತ್ತಂಗಡಿ ಮಾಡಿಸಿಲ್ಲ. ಬೇರೆಯವರಾಗಿದ್ರೆ ಬೀದಿ ಬದಿ ವ್ಯಾಪಾರಿಗಳನ್ನು ಸುಮ್ನೇ ಬಿಡ್ತಿದ್ರಾ ಎಂದು ಕೆಲವರು ಕೇಳಿದ್ದಾರೆ. ಮತ್ತೆ ಕೆಲವರು ನಿಮ್ಮ ಕ್ಷೇತ್ರದಲ್ಲಿರುವ ಬೇರೆ ಬೀದಿ ಬದಿ ವ್ಯಾಪಾರಿಗಳ ಬಳಿಯೂ ಹೋಗಿ ಅವರ ಕಷ್ಟ ಕೇಳಿ ಎಂದು ಸಲಹೆ ಕೊಟ್ಟಿದ್ದಾರೆ.