ನಿರ್ಭಯಾ ನಿಧಿಯ ಉಪಯೋಗಿಸಿಕೊಳ್ಳದೆ ನಗರದ ಕ್ರೈಂ ರೇಟ್‌ ಹೆಚ್ಚಳಕ್ಕೆ ಬಿಜೆಪಿ ಸರಕಾರ ಕಾರಣ

ಗುರುವಾರ, 7 ಅಕ್ಟೋಬರ್ 2021 (20:59 IST)
ಬೆಂಗಳೂರು: ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸೇಫ್‌ ಸಿಟಿ ಪ್ರಾಜೆಕ್ಟ್‌ನ್ನು ರಾಜ್ಯದಲ್ಲಿ ಅಳವಡಿಸಲು ಅನಗತ್ಯ ವಿಳಂಬ ಧೋರಣೆಯನ್ನು ಬಿಜೆಪಿ ಸರಕಾರ ತೋರಿಸುತ್ತಿದೆ. ಈ ಮೂಲಕ ನಗರದ ಕ್ರೈಂ ರೇಟ್‌ ಹೆಚ್ಚಳವಾಗಲು ಕಾರಣವಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದರು.
 
ಗುರುವಾರ ಪ್ರೆಸ್‌ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದೆಹಲಿಯಲ್ಲಿ ನಡೆದಂತಹ ಘನಘೋರ ಅತ್ಯಾಚಾರ ಪ್ರಕರಣದ ನಂತರ ದೆಹಲಿ ನಗರ ಪೊಲೀಸ್‌ ಈ ಯೋಜನೆಯನ್ನು ರೂಪಿಸಿತ್ತು. 2018 ರಲ್ಲಿ ಈ ಯೋಜನೆಗೆ ಕೇಂದ್ರ ಸರಕಾರದ ಗೃಹ ಇಲಾಖೆ ಅನುಮತಿ ನೀಡಿತ್ತು. ಈ ಯೋಜನೆಯ ಅಡಿಯಲ್ಲಿ ಬೆಂಗಳೂರು, ದೆಹಲಿ, ಮುಂಬಯಿ, ಚೆನ್ನೈ, ಹೈದರಾಬಾದ್‌, ಲಕ್ನೋ, ಅಹಮದಾಬಾದ್‌ ಮತ್ತು ಕೋಲ್ಕೊತ್ತಾ ನಗರಗಳಿಗೆ ಹಣಕಾಸಿನ ನೆರವನ್ನು ಒದಗಿಸಲಾಗಿತ್ತು. ಬೆಂಗಳೂರು ನಗರಕ್ಕೆ ಮೊದಲ ಹಂತವಾಗಿ 667 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿತ್ತು ಎಂದು ಮಾಹಿತಿ ನೀಡಿದರು.
 
ಈ ಹಣವನ್ನು ಬಳಸಿಕೊಂಡು ನಗರದಲ್ಲಿ ಮೂರು ವರ್ಷಗಳ ಅವಧಿಯಲ್ಲಿ, 16 ಸಾವಿರ ಕ್ಯಾಮೆರಾಗಳನ್ನು ಅಳವಡಿಸುವುದು ಪ್ರಮುಖ ಗುರಿಯಾಗಿತ್ತು. 50 ಸೇಫ್ಟೀ ಐಲ್ಯಾಂಡ್‌ ಗಳನ್ನು ರೂಪಿಸುವುದು ಈ ಯೋಜನೆಯಲ್ಲಿತ್ತು. ಈ ಯೋಜನೆ ಅನುಷ್ಠಾನ ಮಾಡವಲ್ಲಿ ರಾಜ್ಯ ಸರಕಾರ ವಿನಾಕಾರಣ ವಿಳಂಬ ಮಾಡಿದೆ. ಕೇಂದ್ರ ಸರಕಾರ ಯೋಜನೆಗೆ ಅನುಮತಿ ನೀಡಿದ ನಂತರ ರಾಜ್ಯ ಸರಕಾರ ಮತ್ತೊಂದು ವರ್ಷ ಸಮಯ ತಗೆದುಕೊಂಡಿತು. ಆ ನಂತರ, ಈವರೆಗೂ ನಾಲ್ಕು ಟೆಂಡರ್‌ ಗಳನ್ನು ಕರೆದಿರುವ ರಾಜ್ಯ ಸರಕಾರ ಕೊನೆಗೂ ಯೋಜನೆ ಅನುಷ್ಠಾನಕ್ಕೆ ಕಂಪನಿಯೊಂದನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ ಎಂದು ತಿಳಿಸಿದರು.
 
ವಿಶ್ವದಲ್ಲೇ ಅತಿ ಹೆಚ್ಚು ಸರ್ವೇಲೆನ್ಸ್‌ ಕ್ಯಾಮೆರಾ ಹೊಂದಿರುವ ನಗರ ದೆಹಲಿ: 
 
 
ಕೇಂದ್ರ ಸರಕಾರದಿಂದ ಅನುದಾನ ಪಡೆದುಕೊಳ್ಳುವ ಮೂಲಕ ದೆಹಲಿ ಯಲ್ಲಿ ಪ್ರತಿ ಒಂದು ಚದರ ಮೈಲಿಗೆ 1826.6 ಕ್ಯಾಮೆರಾಗಳನ್ನು ದೆಹಲಿಯಲ್ಲಿ ಅಳವಡಿಸಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸರ್ವೇಲೆನ್ಸ್‌ ಕ್ಯಾಮೆರಾಗಳನ್ನು ಹೊಂದಿರುವ ನಗರ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಲಂಡನ್‌ ನಗರ 2 ನೇ ಸ್ಥಾನದಲ್ಲಿದ್ದು, 3 ಸ್ಥಾನವನ್ನು ಚೈನ್ನೈ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.
 
 ನಗರದಲ್ಲಿ ಈ ಯೋಜನೆ ಪ್ರಾರಂಭಕ್ಕೆ ಗ್ರಹಣ ಹಿಡಿಸಿರುವ ಸರಕಾರ:
 
 ಮಹತ್ವಪೂರ್ಣ ಯೋಜನೆಯ ಅನುಷ್ಠಾನಕ್ಕೆ ಜೆಸಿಬಿ ಸರಕಾರಗಳು ಗ್ರಹಣ ಹಿಡಿಸಿವೆ. ಮಹಿಳೆಯರ ವಿರುದ್ದ ಅಫರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಇದನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಮನಸ್ಥಿತಿಯನ್ನು ತೋರಿಸದೇ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
 
ನಗರದಲ್ಲಿ ಕ್ರೈಂ ರೇಟ್‌ ಹೆಚ್ಚಲು ಬಿಜೆಪಿ ಸರಕಾರ ಕಾರಣ:
 
ನಿರ್ಭಯಾ ನಿಧಿಯನ್ನು ಬಳಸಿಕೊಳ್ಳದೆ ಇರುವ ಮೂಲಕ ನಗರದಲ್ಲಿ ಅಫರಾಧ ಅದರಲ್ಲೂ ಮಹಿಳೆಯರ ಮೇಲಿನ ಅಫರಾಧ ಚಟುವಟಿಕೆಗಳು ಹೆಚ್ಚಾಗಿವೆ. ಯೋಜನೆಯನ್ನು ವಿನಾಕಾರಣ ವಿಳಂಬ ಮಾಡಿದ ಬಿಜೆಪಿ ಸರಕಾರ ಇದಕ್ಕೆ ಮೂಲ ಕಾರಣ. ರಾಜ್ಯ ಸರಕಾರ ಈ ಯೋಜನೆಯ ಅಳವಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಈ ಮೂಲಕ ನಗರವನ್ನು ಮಹಿಳೆಯರಿಗಾರಿ ಸುರಕ್ಷಿತವಾಗಿಸಬೇಕು ಎಂದು ಈ ಸಂದರ್ಭದಲ್ಲಿ ಬೆಂಗಳೂರು ನಗರ ಎಎಪಿ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಾ ಸ್ವಾಮಿ ಆಗ್ರಹಿಸಿದರು.
 
ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಯೋಜಕ ವಿಜಯ್‌ ಶಾಸ್ತ್ರಿಮಠ್‌ ಸೇರಿದಂತೆ ಆಪ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
political

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ