ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಸೂರ್ಯನಿಗೂ ಚಂದ್ರನಿಗೂ, ಅಮಾವಾಸ್ಯೆಗೂ ಹುಣ್ಷಿಮೆಗೂ ವ್ಯತ್ಯಾಸ ತಿಳಿದು ಮಾತನಾಡಲಿ ಎಂದು ಸಂಸದ ತೇಜಸ್ವಿ ಸೂರ್ಯ ವರು ಸಿಎಂ ಅವರ ಟೀಕೆಗೆ ಕೌಂಟರ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಾನುಭವವಿರು ಸಿಎಂ ಸಿದ್ದರಾಯಮ್ಮ ಅವರಿಗೆ ಅಮಾವಾಸ್ಯೆ, ಹುಣ್ಣಿಮೆ ನಡುವಿನ ವ್ಯತ್ಯಾಸ ಗೊತ್ತಿಲ್ವಾ? ವರ್ಷದ 365 ದಿನವೂ ಬೆಳಕು ಕೊಡೋದು ಸೂರ್ಯ ಮಾತ್ರ, ಚಂದ್ರ ಅಲ್ಲ. ಚಂದ್ರನ ಪೂಜೆ ಮಾಡುವವರ ಜೊತೆಯಿದ್ದು, ಅಮಾವಾಸ್ಯೆ ದಿನ ಸೂರ್ಯ ಇರಲ್ಲ ಅಂತ ಸಿಎಂ ಗೊಂದಲಗೊಂಡಿರಬಹುದು ಎಂದು ಕೌಂಟರ್ ನೀಡಿದರು.
ನನ್ನ ತಂದೆ ಸಮಾನವಾಗಿರುವ ಸಿದ್ದರಾಮಯ್ಯರಿಗೆ ನಾನು ವೈಯಕ್ತಿಕವಾಗಿ ಟೀಕಿಸಿದರೆ ನನಗೆ ಶೋಭೆ ತರಲ್ಲ. ಅದು ನನ್ನ ರಾಜಕಾರಣದ ಸಂಸ್ಕಾರದಲ್ಲಾಗಲಿ, ನಮ್ಮ ಪಕ್ಷದ ಸಂಸ್ಕಾರವೂ ಅಲ್ಲ. ಆದರೆ ಸಿಎಂ ಸಿದ್ದರಾಮಯ್ಯರ ಆಡಳಿತವನ್ನು ನಾವು ಪ್ರಶ್ನಿಸಲೇ ಬೇಕು.
ರಾಜ್ಯಕ್ಕೆ ಸಿದ್ದರಾಮಯ್ಯ ಆಡಳಿತ ಎಂಬ ಗ್ರಹಣ ಹಿಡಿದಿದೆ. ಬೆಂಗಳೂರಿನಲ್ಲಿ ನರಕ ಸ್ಥಿತಿ ಇದೆ. ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ರಸ್ತೆಗಳಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ, ಕೊಲೆ, ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಕಂಪನಿಗಳು ಬೆಂಗಳೂರಿಗೆ ಬರ್ತಿಲ್ಲ. ಗೃಹ ಸಚಿವರು ಬೆಟ್ಟಿಂಗ್ನಲ್ಲಿ ಬ್ಯುಸಿ ಇದ್ದರೆ, ಐಟಿ ಸಚಿವರು ಆರ್ಎಸ್ಎಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಇದು ಸಿದ್ದರಾಮಯ್ಯ ಆಡಳಿತದ ವೈಖರಿ ಎಂದು ವಾಗ್ದಾಳಿ ನಡೆಸಿದ್ದಾರೆ.