ಕೇಂದ್ರದ ಏಕರೂಪ ಶಿಕ್ಷಣ ನೀತಿ, ಪ್ರಾದೇಶಿಕ ಭಾಷೆಗಳಿಗೆ ಮಾರಕ

ಭಾನುವಾರ, 23 ಜೂನ್ 2019 (19:23 IST)
ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ಶಿಕ್ಷಣ ನೀತಿಯ ಕರಡನ್ನು ಕೇವಲ ಎರಡು ಭಾಷೆಗಳಲ್ಲಿ ಮಾತ್ರ ಸಿದ್ದಪಡಿಸಿ ಆಕ್ಷೇಪಣೆ-ಅಭಿಪ್ರಾಯ ಸಲ್ಲಿಸುವಂತೆ ರಾಜ್ಯಗಳಿಗೆ ಕಳುಹಿಸಿದೆ. ಒಕ್ಕೂಟದಲ್ಲಿರುವ ಪ್ರಾದೇಶಿಕ ಭಾಷೆಗಳಿಗೆ ಇದು ಮಾರಕವಾಗಿದೆ ಎಂಬ ಟೀಕೆಗಳು ಕೇಳಿಬರಲಾರಂಭಿಸಿವೆ.

ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಲಬುರಗಿ ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಳುಹಿಸಿರುವ ಕರಡುಗೆ ರಾಜ್ಯದ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿದಂತೆ ಸರ್ವರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ.

ಹೀಗಾಗಿ ಆಯಾ ರಾಜ್ಯದ ಭಾಷೆಯಲ್ಲಿ ಕರಡು ಕಳುಹಿಸುವ ಮೂಲಕ ಒಕ್ಕೂಟದ ಬಹುತ್ವವನ್ನು ಕೇಂದ್ರ ಸರ್ಕಾರ ಗೌರವಿಸಬೇಕು ಎಂದ ಅವರು ಅಭಿಪ್ರಾಯ ಸಲ್ಲಿಸಲು ನೀಡಿರುವ ಜೂನ್-30 ಗಡುವನ್ನು ಮುಂದಿನ ಒಂದು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹ ಪಡಿಸಿದರು.

ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ವಿರೋಧಿಸುತ್ತಿರುವುದು ಸ್ವಾಗತಾರ್ಹ. ಆಯಾ ರಾಜ್ಯಗಳ ನಾಡು-ನುಡಿ ಮತ್ತು ಅಸ್ಮಿತೆಯನ್ನು ಉಳಿಸುವುದು ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯದಷ್ಟೆ ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದರು.

ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಕೇಂದ್ರ ಸರ್ಕಾರದ ಅಧೀನ ಇಲಾಖೆಗಳ ನೇಮಕಾತಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎಂದು ಕೂಗಿಗೆ ಇದುವರೆಗೆ ಜಾರಿಗೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕೇಂದ್ರ ಸರ್ಕಾರದ ಈ ಧೋರಣೆಯಿಂದ ತ್ರಿಭಾಷಾ ನೀತಿಯನ್ನು ಅನುಮಾನದಿಂದ ನೋಡುವಂತಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ಸ್ಪಾರ್ಧತ್ಮಕ ಪರೀಕ್ಷೆ ನಡೆಸುವ ಬದ್ಧತೆ ಕೇಂದ್ರ ಸರ್ಕಾರ ಮೊದಲು ಪ್ರದರ್ಶಿಸಲಿ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ