ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ

ಭಾನುವಾರ, 3 ಅಕ್ಟೋಬರ್ 2021 (22:04 IST)
ಬೆಂಗಳೂರು: ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶನಿವಾರ ರಾತ್ರಿ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸಿದ್ದಾರ್ಥ ಲೇಔಟ್ ನಿವಾಸಿ ಮೆಹಬೂಬ್(48) ಕೊಲೆಯಾದ ವ್ಯಕ್ತಿ.
ಗೆದ್ದಲಹಳ್ಳಿಯಲ್ಲಿ ಮೆಹಬೂಬ್ ದ್ವಿಚಕ್ರ ವಾಹನಗಳ ಗ್ಯಾರೇಜ್ ಇಟ್ಟುಕೊಂಡಿದ್ದು, ಅಲ್ಲಿ ಶನಿವಾರ ರಾತ್ರಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಅವರ ಬೀಗರಾದ ನಜೀರ್ ಅಹಮದ್(53) ಎಂಬುವರು ಅಲ್ಲಿಗೆ ಬಂದಿದ್ದಾನೆ. 
ಆಗ ಇಬ್ಬರ ನಡುವೆ ಜಗಳವಾಗಿದೆ. ಜಗಳದ ಒಂದು ಹಂತದಲ್ಲಿ ನಜೀರ್ ಅಹಮದ್ ದೊಣ್ಣೆಯಿಂದ ಮೆಹಬೂಬ್ ಅವರ ತಲೆಗೆ ಹೊಡೆದಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಮೆಹಬೂಬ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಹೆಣ್ಣೂರು ಠಾಣೆ ಪೊಲೀಸರು ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ನಜೀರ್ ಅಹಮದ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮೆಹಬೂಬ್ ಮಗಳನ್ನು ನಜೀರ್ ಅಹಮದ್ ಮಗನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಮೆಹಬೂಬ್ ಮತ್ತು ನಜೀರ್ ಅಹಮದ್ ನಡುವಿನ ಜಗಳಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹ ಇರಬಹುದೆಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ