ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೀಟೂ ಪ್ರಕರಣ

ಬುಧವಾರ, 1 ಡಿಸೆಂಬರ್ 2021 (19:37 IST)
ಬೆಂಗಳೂರು: ಸ್ಯಾಂಡಲ್ ವುಡ್ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೀಟೂ ಪ್ರಕರಣದಲ್ಲಿ ಕಬ್ಬನ್ ಪಾರ್ಕ್​ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದಾರೆ.
ಕಳೆದ‌ ಮೂರು ವರ್ಷಗಳ ಹಿಂದೆ ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿದ್ದ ಮೀಟೂ ಆರೋಪದಲ್ಲಿ ನಟಿ ಶ್ರುತಿ ಹರಿಹರನ್​ಗೆ ಹಿನ್ನಡೆಯಾಗಿದೆ.
ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ದೂರು ನೀಡಿದ್ದರು. ವಿಸ್ಮಯ ಸಿನಿಮಾದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು 2018ರಲ್ಲಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಬಳಿಕ ತನಿಖೆ ಕೈಗೆತ್ತಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕರನ್ನು ಸಾಕ್ಷಿಯಾಗಿ ಹೇಳಿಕೆ ಪಡೆಯಲಾಗಿತ್ತು. ಆದರೆ, ಅರ್ಜುನ್ ಸರ್ಜಾ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷಿಗಳು ಸಿಕ್ಕಿರಲಿಲ್ಲ. ಪೂರಕ ಸಾಕ್ಷಿ ಒದಗಿಸುವಲ್ಲಿ ಸ್ವತಃ ಶ್ರುತಿ ಹರಿಹರನ್ ಸಹ ವಿಫಲರಾಗಿದ್ದರು.
ಪ್ರಕರಣ ದಾಖಲಾದ ಮೂರು ವರ್ಷದ ಬಳಿಕ ಶ್ರುತಿ ಹರಿಹರನ್​ಗೆ ಸಿಆರ್​​​ಪಿಸಿ 159ರ ಅಡಿ ಮತ್ತೆ ನೋಟಿಸ್ ನೀಡಲಾಗಿತ್ತು. ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ