ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ ಕುರಿಗಳು: ಪರಿಹಾರ
ರೈಲಿಗೆ ಸಿಲುಕಿ 120 ಕುರಿಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರಿಗಾಯಿಗಳೊಂದಿಗೆ ಮಾತುಕತೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಲಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹುಡುಗಿ ಕ್ರಾಸ್ ಬಳಿ ರೈಲಿಗೆ ಸಿಲುಕಿ 120 ಕುರಿಗಳು ಸಾವನ್ನಪ್ಪಿದ್ದವು. ಘಟನಾ ಸ್ಥಳಕ್ಕೆ ಕುರಿ ಮಹಾಮಂಡಳಿ ರಾಜ್ಯಾಧ್ಯಕ್ಷ ಪಂಡಿತರಾವ ಚಿದ್ರಿ ಭೇಟಿ ನೀಡಿ, ಕುರಿಗಾಹಿಗಳೊಂದಿಗೆ ಮಾತುಕತೆ ನಡೆಸಿದರು.
ಕುರಿ ಕಳೆದುಕೊಂಡು ಕಂಗಾಲಾಗಿರುವ ಶಹಾಪುರ ತಾಲೂಕಿನ ರಸ್ತಾಪುರ ಮತ್ತು ಗೊಲ್ಲರಗುಡಿಸಲಿನ ಮರೆಪ್ಪ ಅಂಬ್ಲಪ್ಪ, ಭೀಮಣ್ಣ ಅಂಬ್ಲಪ್ಪ, ಹೈಯ್ಯಾಳಪ್ಪ ಯರಪ್ಪ ಮತ್ತು ಹೈಯಾಳಪ್ಪ ಅಂಬ್ಲಪ್ಪ ಅವರಿಗೆ ಧೈರ್ಯ ತುಂಬಿದರು.
ಸಾವನ್ನಪ್ಪಿದ ಪ್ರತಿ ಕುರಿಗೆ 5 ಸಾವಿರ ರೂ. ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.