ಬ್ರಿಗೇಡ್‌ನಿಂದ ಹಿಂದೆ ಸರಿಯವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪಗೆ ಈಶ್ವರಪ್ಪ ಟಾಂಗ್

ಶನಿವಾರ, 8 ಅಕ್ಟೋಬರ್ 2016 (19:20 IST)
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಹಿಂದೆ ಸರಿಯವ ಪ್ರಶ್ನೆಯೇ ಇಲ್ಲ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಬೆಂಬಲಿಗರ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 
 
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಕೆ.ಎಸ್.ಈಶ್ವರಪ್ಪನವರೂ ಹಿಂದೆ ಸರಿದಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ಬ್ರಿಗೇಡ್ ಕಾರ್ಯಚರಣೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬ್ರಿಗೇಡ್ ನಿಲ್ಲಿಸಲು ಅದೇನು ಕೊಳಾಯಿ ನೀರೆ ಎಂದು ಬ್ರಿಗೇಡ್ ಕಾರ್ಯದರ್ಶಿ ಮುಕಡಪ್ಪ ಸ್ಪಷ್ಟಪಡಿಸಿದ್ದಾರೆ. 
 
ಪಕ್ಷದ ವೇದಿಕೆ ಬಿಟ್ಟು ಪ್ರತ್ಯೇಕ ಸಂಘಟನೆ ಕಟ್ಟುವುದು ಸರಿಯಲ್ಲ. ಹೀಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕೈಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಅವರು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ತಾಕೀತು ಮಾಡಿದರು. ಹೀಗಾಗಿ ಇಂದು ರಾಯಣ್ಣ ಬ್ರಿಗೇಡ್‌ನ ತುರ್ತು ಸಭೆ ಕರೆಯಲಾಗಿತ್ತು. 
 
ಸಭೆ ಬಳಿಕ ಮಾಧ್ಯಮದವರಿಗೆ ಹೇಳಿಕೆ ಕೊಡಲು ನಿರಾಕರಿಸಿರುವ ಈಶ್ವರಪ್ಪನವರು, ಯಾವುದೇ ಕಾರಣಕ್ಕೂ ಬ್ರಿಗೇಡ್‌ನಿಂದ ಹಿಂದೇ ಸರಿಯಲ್ಲ ಎಂದು ತಮ್ಮ ಬೆಂಬಲಿಗರ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ