ಮೈಸೂರಿಗೆ ಆಕಾಶದಲ್ಲಿ ಹೋಗ್ತಿರಾ? ಪ್ರತಾಪ್ ಸಿಂಹಗೆ ಸುಮಲತಾ ತಿರುಗೇಟು

ಗುರುವಾರ, 19 ಆಗಸ್ಟ್ 2021 (17:31 IST)
ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ತಮ್ಮದು
ಎಂದು ಹೇಳಿಕೊಳ್ಳುತ್ತಾರೆ. ಮಂಡ್ಯ ರೈತರು ಭೂಮಿ ಕೊಡದೇ ಮೇಲಿನಿಂದ ಹಾರಿ ಹೋಗ್ತಿರಾ ಎಂದು ಸಂಸದ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ದಶಪಥ ರಸ್ತೆ ಮೈಸೂರಿನದ್ದು, ಅದರ ಕ್ರೆಡಿಟ್ ಮಂಡ್ಯ, ರಾಮನಗರದವರು ತಮ್ಮದೆಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ಜನರನ್ನು ಲೆಕ್ಕಿಸದೇ ಮೈಸೂರು ಎನ್ನುವುದನ್ನು ನಾನು ಒಪ್ಪಲಾರೆ. ಬೆಂಗಳೂರಿನಿಂದ ಮೈಸೂರಿಗೆ ಹೇಗೆ ಹೋಗ್ತಾರೆ? ಆಕಾಶದಲ್ಲಿ ಹಾರಿಕೊಂಡು ಹೋಗ್ತಾರಾ? ಮಂಡ್ಯ ಇಲ್ಲದೇ ಮೈಸೂರು ಇಲ್ಲ. ಅವರು ತಮ್ಮ ಕ್ಷೇತ್ರದ ಇತಿಮಿತಿಯಲ್ಲಿ ಮಾತನಾಡಬೇಕು ಎಂದರು.
ಇದೇ ವೇಳೆ ಸುಮಲತಾ ತಮ್ಮ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜೆಡಿಎಸ್ ಶಾಸಕ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕ್ರಿಮಿನಲ್ ಗಳೇ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಹೇಳುವುದು ಹಾಸ್ಯಸ್ಪದ ಎಂದು ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ