ಉತ್ತರದಲ್ಲಿರುವ 6 ಹಾಸ್ಟೆಲ್ ಯಲಹಂಕಕ್ಕೆ ವರ್ಗಾವಣೆ- ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು

ಬುಧವಾರ, 3 ಆಗಸ್ಟ್ 2022 (19:31 IST)
ಬೆಂಗಳೂರು ಉತ್ತರದಲ್ಲಿರುವ 6 ಹಾಸ್ಟೆಲ್ ಗಳನ್ನು ಯಲಹಂಕ ಭಾಗಕ್ಕೆ ವರ್ಗಾವಣೆ ಮಾಡಲು ಸರ್ಕಾರ ಎಕಾಏಕಿ ನಿರ್ಧಾರ ಮಾಡಿದ್ದು ಯಾವುದೇ ರೀತಿಯ ಪೂರ್ವ ಸೂಚನೆ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳನ್ನು ಬಿಟ್ಟು ತೆರಳುವಂತೆ ಸೂಚನೆ ನೀಡುತ್ತಿದ್ದಾರೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ತುಂಬಾ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದ್ದು ಇದನ್ನು ಪ್ರಶ್ನಿಸಿ ಕಳೆದ ಒಂದು ವಾರದಿಂದ ತಮ್ಮ ತರಗತಿಗಳಿಗೂ ತೆರಳದೆ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ ಆದರೂ ಯಾವೊಬ್ಬರೂ ಇವರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ.
 
ಸರ್ಕಾರದ ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜಿನಿಂದ ಹಾಸ್ಟೆಲ್ ವರೆಗಿನ ದೂರ ದುಪ್ಪಟ್ಟು ಆಗಿ ಸುಮಾರು 60 ಕಿಲೋಮೀಟರ್ ಬೀಳಲಿದೆ ಜೊತೆಗೆ ಹಳ್ಳಿ ಭಾಗದಲ್ಲಿರುವ ಈ ಸ್ಥಳಾಂತರಿತ ಹಾಸ್ಟೆಲ್ ಗಳಿಗೆ ಸರಿಯಾಗಿ ಬಸ್ ಸೇವೆಯೂ ಇಲ್ಲ ವಿದ್ಯಾರ್ಥಿಗಳು ಬಸ್ ಸ್ಟಾಪ್ ನಿಂದ 3 ಕಿಲೋಮೀಟರಿನಷ್ಟು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಸಮಯಾವಕಾಶ ನೀಡಿ ಎಂದರು ಕಟುಕ ಅಧಿಕಾರಿಗಳು ಇದಕ್ಕೆಲ್ಲ ಆಸ್ಪದ ನೀಡುತ್ತಿಲ್ಲ. ಮಾನ್ಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರಲ್ಲಿ ಇದರ ಬಗ್ಗೆ ನಿವೇದನೆ ಮಾಡಿಕೊಂಡರೂ ಯಾವ ಪ್ರಯೋಜನವೂ ಆಗಲಿಲ್ಲ.
 
ಸರ್ಕಾರಿ ಹಾಸ್ಟೆಲ್ ಗಳಲ್ಲಿ ದೊಡ್ಡವರು ಯಾರೂ ವಾಸಿಸುವುದಿಲ್ಲ ವಾಸಿಸುವವರು ಎಲ್ಲಾ ಬಡವರ ಮಕ್ಕಳೇ ಅವರು ಬೀದಿಗೆ ಬೀಳದಂತೆ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ