ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ತೆರಿಗೆ ಹಣ ಬಳಕೆ: BY ವಿಜಯೇಂದ್ರ ಟೀಕೆ

Sampriya

ಶನಿವಾರ, 31 ಮೇ 2025 (18:54 IST)
ಮಂಡ್ಯ: ರಾಜ್ಯ ಸರಕಾರವು ನಿನ್ನೆ ಹೊಸ ಆದೇಶ ಹೊರಡಿಸಿದೆ. ಗ್ಯಾರಂಟಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಬಿಡುಗಡೆಗೆ ಆದೇಶ ಮಾಡಿದೆ.  ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರಿ ನೌಕರರಿಗೆ ಸಂಬಳ ಕೊqಲು ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೆ, ಕಸದ ಮೇಲೆ ತೆರಿಗೆ ಹಾಕುವಂತಹ ಸರಕಾರ ಸಿದ್ದರಾಮಯ್ಯರ ನೇತೃತ್ವದ್ದು ಎಂದು ಟೀಕಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಎಲ್ಲ ಶಾಸಕರು ಅನುದಾನವಿಲ್ಲದೆ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಬೆಲೆ ಏರಿಕೆ ಮೂಲಕ ಸರಕಾರವು ಬಡವರಿಗೆ ಬರೆ ಎಳೆಯುತ್ತಿದೆ. ಕೂಡಲೇ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಹೀನಾಯವಾಗಿ ಸೋಲುವುದು ನಿಶ್ಚಿತ ಎಂಬುದು ಸರ್ವೇಯ ಫಲಿತಾಂಶದಿಂದ ಗೊತ್ತಾಗಿದೆ. ಬಡವರ ವಿರೋಧಿ ಸರಕಾರ ತೊಲಗಬೇಕು ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ನಾಯಿ ಕಚ್ಚಿದೆ ಎಂಬ ಕಾರಣಕ್ಕೆ ಮೂರೂವರೆ ವರ್ಷದ ಮಗುವು ಚಿಕಿತ್ಸೆಗೆ ಕರೆದೊಯ್ದರೆ ಆಸ್ಪತ್ರೆಯಲ್ಲಿ ಔಷಧಿ ಇಲ್ಲ; ಔಷಧಿ ಇಲ್ಲವೆಂದು ಬೇರೆ ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರ ಕಿರುಕುಳದಿಂದ ಮಗು ಮೃತಪಟ್ಟಿದೆ. ಪೊಲೀಸರಿಗೆ ರಾಜ್ಯ ಸರಕಾರದಿಂದ ಒತ್ತಡ ಇತ್ತು. ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯ ಆಗದೇ ಎಲ್ಲ ಇಲಾಖೆಗಳಿಗೂ ಸರಕಾರವು ಟಾರ್ಗೆಟ್ ನೀಡಿದೆ ಎಂದು ಆರೋಪಿಸಿದರು.

ಪೊಲೀಸರಿಗೂ ಟಾರ್ಗೆಟ್ ಇತ್ತು ಎಂದರು. ಮಗು ಮೃತಪಟ್ಟ ಕುಟುಂಬದ ಸದಸ್ಯರನ್ನೂ ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ; ಬಡವರಿಗೆ ಕೇಂದ್ರದ ಯೋಜನೆ ತಲುಪಬಾರದು ಎಂಬ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು. ಆಸ್ಪತ್ರೆಗಳ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಗಮನಿಸಬೇಕು ಎಂದು ಆಗ್ರಹಿಸಿದರು.

ಪರಿಸ್ಥಿತಿ ಕೈ ಮೀರಿದರೆ ಸರಕಾರವೇ ಹೊಣೆ

ಕರಾವಳಿ ಭಾಗದಲ್ಲಿ ಗಲಭೆ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಸಚಿವರು, ದಕ್ಷಿಣ ಕನ್ನಡದ ಉಸ್ತುವಾರಿ ಸಚಿವ, ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಮುಸ್ಲಿಂ ಯುವಕನ ಹತ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ಅನೇಕ ಬಜರಂಗದಳ, ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಸೇರಿ ಅನೇಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ರಾಜ್ಯ ಸರಕಾರವು, ಕಾಂಗ್ರೆಸ್ ಪುಡಾರಿಗಳ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಪೆÇಲೀಸರಿಂದ ಅತಿರೇಕದ ವರ್ತನೆ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿದರೆ, ಪರಿಸ್ಥಿತಿ ಮಿತಿಮೀರಿದರೆ ಅದಕ್ಕೆ ಕಾಂಗ್ರೆಸ್ ಸರಕಾರ, ಗೃಹ ಸಚಿವರು, ಮುಖ್ಯಮಂತ್ರಿಗಳೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಕೋಮು ನಿಗ್ರಹ ದಳವನ್ನು ಹೊಸದಾಗಿ ಸ್ಥಾಪನೆ ಮಾಡಿದ್ದಾರೆ. ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಟಾರ್ಗೆಟ್ ಮಾಡಲೆಂದೇ ಇದನ್ನು ಸ್ಥಾಪಿಸಿದ್ದಾರೆ. ಕಾಂಗ್ರೆಸ್ ನಿಂದ ಕೆಟ್ಟ ವಕ್ರದೃಷ್ಟಿ ಆಗುತ್ತಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹಾಳಾದರೆ, ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಆಪರೇಷನ್ ಸಿಂದೂರದ ವೇಳೆ ಬೇಹುಗಾರಿಕಾ ದಳದ ವೈಫಲ್ಯ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಮಂಗಳೂರಿನಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆ ಆಗಿದೆ, ಇವರ ಇಂಟಲಿಜೆನ್ಸ್ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಸುಹಾಸ್ ಶೆಟ್ಟಿ ಹತ್ಯೆಯಾದ ಸಂದರ್ಭದಲ್ಲಿ ಯಾವ ರೀತಿ ಮಹಿಳೆಯರು ತೊಡಗಿಸಿಕೊಂಡಿದ್ದರು ಎಂದು ತಿಳಿದಿದೆ. ಹತ್ಯೆ ಮಾಡುವುದಕ್ಕೆ ಹೊರ ದೇಶದಿಂದ ಹಣ ಕೊಟ್ಟಿರುವ ಬಗ್ಗೆ ಚರ್ಚೆಯಾಗುತ್ತಿದೆ. ಇವುಗಳನ್ನು ಗಂಭೀರವಾಗಿ ಪರಿಗಣಿಸದೆ ರಾಜ್ಯ ಸರಕಾರವು ಕೇವಲ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಇದಕ್ಕೆ ಮುಂದೆ ಭಾರಿ ಬೆಲೆ ತೆರಬೇಕಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಹುಬ್ಬಳ್ಳಿ ಕೇಸುಗಳನ್ನು ಹಿಂಪಡೆದಾಗ ನಾವು ಪ್ರತಿಭಟನೆ ಮಾಡಿದ್ದೆವು. ಇದೀಗ ಹೈಕೋರ್ಟ್, ಸರಕಾರಕ್ಕೆ ಛೀಮಾರಿ ಹಾಕಿದೆ. ಅಲ್ಲದೆ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮಂಗಳಾರತಿ ಎತ್ತಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

ತುಮಕೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಹೇಮಾವತಿ ನೀರು ಸಿಗಬೇಕು; ರೈತರಿಗೆ ನ್ಯಾಯ ಸಿಗಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಬಿಜೆಪಿಯ ಕೆಲವರನ್ನು ಬಂಧಿಸಿದ್ದಾರೆ. ಇದರಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದರು. ತುಮಕೂರು ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ