ಬೆಂಗಳೂರಲ್ಲಿ ತರಕಾರಿ ಬೆಲೆ ಕೇಳಿದ್ರೆ ತಿನ್ನಂಗಿಲ್ಲ, ಮುಟ್ಟಿ ಖುಷಿ ಪಡ್ಬೇಕಷ್ಟೇ

Krishnaveni K

ಮಂಗಳವಾರ, 28 ಮೇ 2024 (09:52 IST)
ಬೆಂಗಳೂರು: ಈ ಬಾರಿ ಬಿರು ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಬೆಲೆ ಕೇಳಿಯೇ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. ತರಕಾರಿ ಬೆಲೆ ಹೇಗಿದೆ ಇಲ್ಲಿದೆ ವಿವರ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೋಸಿ ಹೋಗಿರುವ ಜನಕ್ಕೆ ಈಗ ತರಕಾರಿ ಬೆಲೆ ಗಾಯದ ಮೇಲೆ ಬರೆಯಂತಾಗಿದೆ. ಅದರಲ್ಲೂ ನಿತ್ಯ ಉಪಯೋಗಿಸಬೇಕಾದ ತರಕಾರಿಗಳ ಬೆಲೆಯೇ ಆಕಾಶ ಮುಟ್ಟಿದೆ. ತರಕಾರಿ ಹಾಕಿ ಸಾಂಬಾರ್ ಮಾಡುವುದು ಬಿಡಿ, ನೋಡಿದರೂ ಬೆಚ್ಚಿಬೀಳುವ ಪರಿಸ್ಥಿತಿಯಿದೆ.

ಕಳೆದ ವಾರ 200 ರೂ. ಗಳಷ್ಟಿದ್ದ ಬೀನ್ಸ್ ಬೆಲೆ ಈಗ 220 ರೂ. ದಾಟಿದೆ. ಅಂದಾಜು 20-40 ರೂ.ಗಳಿದ್ದ ತರಕಾರಿಗಳ ಬೆಲೆ 80 ರೂ. ದಾಟಿದೆ.  120 ರೂ.ಗಳಷ್ಟಿದ್ದ ಹಸಿರು ಬಟಾಣಿ ಬೆಲೆ 140 ರಿಂದ 180 ರೂ.ಗೆ ಏರಿಕೆಯಾಗಿದೆ. ಬೆಳ್ಳುಳ್ಳಿ ಅಂತೂ 330 ರೂ. ದಾಟಿದೆ. ಹಸಿಮೆಣಸಿನಕಾಯಿ ಚಿಲ್ಲರೆ ಕೇಳುವ ಹಾಗೆಯೇ ಇಲ್ಲ. ಯಾಕೆಂದರೆ 80-100 ರೂ.ಗೆ ಏರಿಕೆಯಾಗಿದೆ. ಶುಂಠಿ 180-190 ರೂ.ಗೆ ತಲುಪಿದೆ.

ಉಳಿದಂತೆ ಟೊಮೆಟೊ ಸಾಧಾರಣ ಗುಣಮಟ್ಟದ್ದು 30 ರಿಂದ 40 ರೂ.,  ಆಲೂಗಡ್ಡೆ 40 ರೂ., ಹಾಗಲಕಾಯಿ 60-80 ರೂ., ದಪ್ಪ ಮೆಣಸಿನಕಾಯಿ 40-60 ರೂ.,  ಬದನೆಕಾಯಿ 60-70 ರೂ., ಬೆಂಡೆಕಾಯಿ 60 ರೂ., ಕ್ಯಾರೆಟ್ 80 ರೂ.,  ನವಿಲು ಕೋಸು 70-90 ರೂ., ಬೀಟ್ರೂಟ್ 40-50 ರೂ., ಈರುಳ್ಳಿ 30-50 ರೂ. ವರೆಗೆ ಬೆಲೆ ಏರಿಕೆಯಾಗಿದೆ.

ಬಿಸಿಲು ಹೆಚ್ಚಾಗಿರುವುದರಿಂದ ತರಕಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ ಎನ್ನಲಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಲೇ ಇದೆ. ಆದರೂ ಬೆಲೆ ಮಾತ್ರ ಇಳಿಕೆಯಾಗಿಲ್ಲ. ಇನ್ನು ಮಳೆ ಹೆಚ್ಚಾದಂತೆ ಮಳೆಯಿಂದಾಗಿ ಬೆಳೆ ನಾಶ ಎಂದು ಮತ್ತೆ ತರಕಾರಿ ಬೆಲೆ ಹೆಚ್ಚಾಗುವುದು ಗ್ಯಾರಂಟಿ.  ಬೆಲೆ ಹೆಚ್ಚಾಗಿರುವುದರಿಂದ ಖರೀದಿ ಪ್ರಮಾಣವೂ ಕಡಿಮೆಯಾಗಿದೆ. ತರಕಾರಿ ಬೆಲೆ ಮಧ್ಯಮ ವರ್ಗದವರಿಗೆ ದೊಡ್ಡ ಹೊರೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ