ಬೆಂಗಳೂರು: ಚುನಾವಣಾ ಪ್ರಚಾರ ಮಾಡಲು ಬಂದಾಗ ಮಹಿಳೆಯರು ತಿಲಕವಿಡಲು ಹೋದಾಗ ಸಿಎಂ ಸಿದ್ದರಾಮಯ್ಯ ಬೇಡ ಎಂದು ಕೈ ಎತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಕುಂಕುಮ ಕಂಡರೆ ಇವರಿಗೆ ಭಯ ಎಂದು ವ್ಯಂಗ್ಯ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಮಹಿಳೆಯರು ಆರತಿ ಎತ್ತಿ ಕುಂಕುಮವಿಡಲು ಬಂದಿದ್ದಾರೆ. ಈ ವೇಳೆ ತಡೆದ ಸಿದ್ದರಾಮಯ್ಯ ಬೇಡ ಎಂದಿದ್ದಾರೆ. ಇದು ಎರಡು ಮೂರು ಕಡೆ ಇದೇ ರೀತಿ ಆಗಿದೆ.
ಈ ವಿಡಿಯೋ ಹಂಚಿಕೊಂಡಿರುವ ಆರ್ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಲಕ ಕಂಡರೆ ಭಯ, ಕುಂಕುಮ ಎಂದರೆ ಬೇಡ! ಸಿದ್ದರಾಮಯ್ಯನವರಿಗೆ ಹಿಂದೂಗಳು ಹಚ್ಚುವ ಕುಂಕುಮ, ತಿಲಕ ಬೇಡ ಆದರೆ ವೋಟ್ ಮಾತ್ರ ಬೇಕು. ತಿಲಕ ಹಚ್ಚಿದರೆ ವೋಟ್ ಬ್ಯಾಂಕ್ ಮುನಿಸಿಕೊಳ್ಳುತ್ತೆ ಎನ್ನುವ ಭಯವೇ?
ಬಾಗಲಕೋಟೆಯಲ್ಲಿ ಮಹಿಳೆಯರು ಆರತಿ ಎತ್ತಿ ಕುಂಕುಮ ಹಚ್ಚಲು ಮುಂದಾದರೆ ತಿರಸ್ಕಾರ ಮನೋಭಾವ. ಇಂಥಹ ಕಾಂಗ್ರೆಸ್ ನ ತುಷ್ಟೀಕರಣದಿಂದಲೇ ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಮತಾಂಧರು ಕಲ್ಲು ತೂರಿದ್ದು ಎಂದು ಅಶೋಕ್ ಕಿಡಿ ಕಾರಿದ್ದರೆ.