ಮಂಗಳೂರು: ಆಟೋ ಚಾಲಕರೊಬ್ಬರು ಜೀವನದಲ್ಲಿ ಮೊದಲ ಬಾರಿಗೆ ಫೈನ್ ಕಟ್ಟಿದ ಬೇಸರದಲ್ಲಿ ಕಣ್ಣೀರು ಹಾಕಿ ಹೇಳಿದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಿಮಗೂ ಈ ಮಾತುಗಳು ನಿಜವೆನಿಸಬಹುದು.
ಮಂಗಳೂರಿನ ಚಾಲಕ ರೆಜಿತ್ ಕುಮಾರ್ ಎಂಬವರು ಫೈನ್ ಕಟ್ಟಿಸಿಕೊಂಡ ಬಳಿಕ ಬೇಸರದಲ್ಲಿ ಹಂಚಿಕೊಂಡ ಮಾತುಗಳು ಹೀಗಿವೆ: ನನಗೆ ಲೈಸೆನ್ಸ್ ಆಗಿದ್ದ 2012 ರಲ್ಲಿ. ಅಂದರೆ ಈಗ 13 ವರ್ಷ ಆಯ್ತು. ನನ್ನ ಜೀವನದಲ್ಲಿ ಲೈಸೆನ್ಸ್ ಆದ ಬಳಿಕ ಚೆನ್ನೈ, ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ ಎಂದು ಹಲವು ಊರುಗಳಿಗೆ ಹೋಗಿದ್ದೆ. ಆದರೆ ಇದುವರೆಗೆ ನನ್ನ ಲೈಸೆನ್ಸ್ ಗೆ ಫೈನ್ ಬಿದ್ದಿಲ್ಲ. ಆದರೆ ಇಂದು ಫಸ್ಟ್ ಟೈಂ ದಂಡ ಕಟ್ಟಿದೆ. ನೋಡಿ ಫೈನ್ ಕಟ್ಟಿದ ರಸೀದಿ ಕೂಡಾ ನನ್ನಲ್ಲಿದೆ.
ಎಷ್ಟು ರಿಕ್ವೆಸ್ಟ್ ಮಾಡಿದ್ರೂ ಬಿಡಲಿಲ್ಲ. ಬೆಳಿಗ್ಗೆಯಿಂದ ಸುತ್ತು ಹಾಕಿ ದುಡಿದಿದ್ದ ಕೇವಲ 200 ರೂ. ಚಿಲ್ಲರೆ. ಬೇರೆಯವರ ರೀತಿ ಮೋಸ ಮಾಡಿಲ್ಲ, ಬೇರೆಯವರಿಗೆ ದುಡ್ಡಿಗೆ ಕೈ ಹಾಕಿಲ್ಲ. ನಿಯತ್ತಿನಲ್ಲಿ ದುಡಿದ ಹಣ. ಆದರೆ ಅದಕ್ಕೂ ಬಿಡ್ತಿಲ್ಲ. ಪಾರ್ಕಿಂಗ್ ನಲ್ಲಿ ಗಾಡಿ ಇಡಬೇಕು ಎನ್ನುತ್ತಾರೆ. ಮಂಗಳೂರಿಗೆ ಬಂದು ನೋಡಿ ಎಲ್ಲಾದ್ರೂ ಪಾರ್ಕಿಂಗ್ ನಲ್ಲೇ ಗಾಡಿ ಇರುತ್ತಾ? ತೊಂದರೆ ಇಲ್ಲ ಎಲ್ಲರೂ ದುಡಿಯಲಿ. ಜಾಗ ಇಲ್ಲ ಎಂದು ನನ್ನಷ್ಟಕ್ಕೆ ಸೈಡ್ ಗೆ ನಿಲ್ಲಿಸಿದ್ದೆ. ಅದಕ್ಕೆ ಫೈನ್ ಕಟ್ಟಿಸಿದ್ರು. ನೀವು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದರೆ ಫೈನ್ ಕಟ್ಟಿಸಲಿ. ಆದರೆ ನಿಮ್ಮಲ್ಲಿ ಒಂದು ರಿಕ್ವೆಸ್ಟ್ ಮಾಡುವಾಗ ಒಂದು ಮರ್ಯಾದೆ ಬೇಡ್ವಾ? ಒಂದು ರಿಕ್ಷಾ, ಆಟೋ ಚಾಲಕರು ಎಷ್ಟು ಕಷ್ಟಪಟ್ಟು ದುಡಿಯುತ್ತಾರೆ, ಡ್ರೈವರ್ ಗಳು ದಿನಕ್ಕೆ 1000 ದುಡಿಯಲು ಭಾರೀ ಕಷ್ಟಪಡುತ್ತಾರೆ. ರಾತ್ರಿ ಮನೆಗೆ ಹೋಗುವಾಗ ಮೈ-ಕೈ ಎಲ್ಲಾ ನೋವಾಗಿರುತ್ತದೆ ಎಂದು ನನಗೆ ಗೊತ್ತು. ಆದರೆ ಒಂದು ರಿಕ್ವೆಸ್ಟ್ ಕೋಟಿ ಕೋಟಿ ಕೊಳ್ಳೆ ಹೊಡೆದವರನ್ನು ಡಕಾಯಿತರನ್ನು ನೀವು ಬಿಟ್ಟಿದ್ದೀರಿ. ರಸ್ತೆ ಗುಂಡಿ ಹಾಗೇ ಬಿಟ್ಟವರಿಗೆ ಫೈನ್ ಹಾಕಲ್ಲ. ಮೊದಲು ಅವರನ್ನು ಹಿಡಿದು ದಂಡ ಹಾಕಿ. ನಮ್ಮಂತಹ ಬಡಪಾಯಿಗಳನ್ನು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ.
ಅವರ ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ನೀವು ಎಷ್ಟು ನಿಯತ್ತಾಗಿದ್ದಿರಿ ಎನ್ನುವುದಕ್ಕೆ ನಿಮ್ಮ ಈ ಕಣ್ಣೀರೇ ಸಾಕ್ಷಿ. ನಿಯತ್ತಾಗಿ ದುಡಿಯುವವರಿಗೆ ಇದು ಕಾಲವಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.