ಹಣ ದುಪ್ಪಟ್ಟು ಮಾಡೋ ದಂಧೆಕೋರರಿಗೆ ಏನಾಯ್ತು?

ಶುಕ್ರವಾರ, 17 ಮೇ 2019 (12:29 IST)
ಮುಂಬೈನಿಂದ ಬಂದ ತಂಡವೊಂದು ಹಣ ದುಪ್ಪಟ್ಟು ಮಾಡುವ ದಂಧೆಯಲ್ಲಿ ತೊಡಗಿದ್ದು, ಅವರಲ್ಲಿ ಓರ್ವ ಫೈರಿಂಗ್ ಗೆ ಬಲಿಯಾಗಿದ್ದಾನೆ.

ಮೈಸೂರಿನಲ್ಲಿ ಸಕ್ರಿಯವಾಗಿರುವ ಹಣ ದುಪ್ಪಟ್ಟು ಮಾಡುವ ದಂಧೆಕೋರರ ಕುರಿತು ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ್ದರು ಪೊಲೀಸರು. ಆದರೆ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಫೈರಿಂಗ್ ನಡೆಸಲು ಹೋಗಿ ಅವರಲ್ಲಿ ಓರ್ವನ ಮೇಲೆ ಅಚಾನಕ್ ಆಗಿ ಗುಂಡು ಹಾರಿದೆ. ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ದುಪ್ಪಟ್ಟು ಮಾಡುವ ದಂಧೆಯೊಂದು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಜಯ ನಗರ ಠಾಣಾ ಇನ್ಸಪೆಕ್ಟರ್ ಕುಮಾರ್ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು. ಸ್ಥಳಕ್ಕೆ ಕುಮಾರ್ ಅವರು ತೆರಳುತ್ತಿದ್ದಂತೆ ಮೂರು ಮಂದಿ ಅಲ್ಲಿಂದ ಪರಾರಿಯಾಗಿದ್ದು, ಓರ್ವ ಸಿಕ್ಕಿಹಾಕಿಕೊಂಡಿದ್ದ. ಸಿಕ್ಕಿ ಕೊಂಡ ವ್ಯಕ್ತಿ ಸಿನಿಮೀಯ ರೀತಿಯಲ್ಲಿ ಇನ್ಸಪೆಕ್ಟರ್ ಬಳಿ ಇರುವ ಗನ್ ಕಸಿದು ಅವರ ಮೇಲೆಯೇ ಫೈರಿಂಗ್ ಮಾಡಲು ಮುಂದಾಗಿದ್ದ. ಆದರೆ ಅಚಾನಕ್ ಆಗಿ ಗುಂಡು ಅವನಿಗೆ ಸಿಡಿದಿದೆ.

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅತನನ್ನು ಕೆ.ಆರ್.ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಅವರೆಲ್ಲ ಯಾರು, ಸತ್ತವನು ಎಲ್ಲಿಯವನು ಎಂಬುದರ ಕುರಿತು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ