ಏಳು ಜನರನ್ನು ಬಲಿಪಡೆದ ಒಂಟಿ ಸಲಗ ಏನಾಯ್ತು?

ಸೋಮವಾರ, 26 ಆಗಸ್ಟ್ 2019 (18:55 IST)
ಏಳು ಜನರ ಸಾವಿಗೆ ಕಾರಣವಾಗಿದ್ದ ಒಂಟಿ ಸಲಗದ ಕಥೆ ಕೊನೆಗೂ ಹೀಗಾಗಿದೆ.

ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆನೇಕಲ್ ಬಳಿ ಮೂರು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಪುಂಡಾನೆಯನ್ನು ಎರಡು ಸಾಕಾನೆಗಳನ್ನು ಬಳಸಿ ಸೆರೆಹಿಡಿಯಲಾಗಿದೆ. ಪುಂಡಾನೆ ಸೆರೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿ ಪುಂಡಾನೆಗೆ ಅರಣ್ಯ ಇಲಾಖೆ ಖೆಡ್ಡಾ ತೋಡಿತ್ತು. ಗ್ರಾಮಸ್ಥರಲ್ಲಿ ಭಯ ಹುಟ್ಟುಹಾಕಿದ್ದ ಎರಡು ಸಲಗಗಳ ಪೈಕಿ ಒಂದು ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಆನೆಗಳು 3 ತಿಂಗಳಿಂದ ತಮಿಳುನಾಡು ಹಾಗೂ ಕರ್ನಾಟಕ ಗಡಿಯ ಗ್ರಾಮಸ್ಥರ ನಿದ್ದೆಗೆಡಿಸಿದ್ದವು.

ಎಂಟು ದಿನಗಳ ಹಿಂದೆ ಸರ್ಜಾಪುರ ಸಮೀಪದ ತಿರುವರಂಗದಲ್ಲಿ ಇದೇ ಆನೆ ರೈತನೊಬ್ಬನನ್ನು ಸಾಯಿಸಿತ್ತು. ಆನೆಯ ಉಪಟಳಕ್ಕೆ ತಮಿಳುನಾಡಿನ ಹಾಗೂ ಕರ್ನಾಟಕ ಭಾಗದ ಅರಣ್ಯ ಅಧಿಕಾರಿಗಳು ಹೈರಾಣಾಗಿದ್ದರು. ಸೆರೆಹಿಡಿದಿರುವ ಆನೆಗೆ ಎರಡು ದಂತದಲ್ಲಿ ಒಂದು ದಂತ ಕೆಳಭಾಗಕ್ಕೆ ವಾಲಿ ಕೊಂಡಿದೆ.

ಇದರಿಂದಲೇ ಆನೆ ಎಲ್ಲಿ ಹೋದರೂ ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಲು ಸುಲಭವಾಗಿತ್ತು. ಕೊನೆಗೂ ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯನ್ನು ಸೆರೆ ಹಿಡಿದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ