ಗೃಹಲಕ್ಷ್ಮಿ ಯೋಜನೆ ಅವ್ಯವಸ್ಥೆಗೆ ಕಾರಣವೇನು?

geetha

ಶುಕ್ರವಾರ, 5 ಜನವರಿ 2024 (18:21 IST)
ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡರೂ ಸಹ ಎಷ್ಟೋ ಮಂದಿಗೆ ಹಣ ಬರುತ್ತಿಲ್ಲ. ಈ ಸಮಸ್ಯೆಗೆ ಕಾರಣವನ್ನು ಡಿ.ಕೆ. ಶಿವಕುಮಾರ್‌ ಬಹಿರಂಗಪಡಿಸಿದ್ದಾರೆ.  ಶುಕ್ರವಾರ ಯಲಹಂಕದಲ್ಲಿ “ಮನೆ ಬಾಗಿಲಿಗೆ ಸರ್ಕಾರ”  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ನೋಂದಣಿ ವೇಳೆಯಲ್ಲಿ ಮಾಡಿರುವ ಎಡವಟ್ಟುಗಳಿಂದಾಗಿ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ ಎಂದರು. 
 
ಕಳೆದ ಬಾರಿ ಜನಸ್ಪಂದನದಲ್ಲಿ ಈ ವಿಷಯ ನನ್ನ ಗಮನಕ್ಕೆ ಬಂತು. ಸುಮಾರು 5-6 ಲಕ್ಷ ಮಂದಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿಕೊಂಡಿದ್ದರೂ ಹಣ ಬಂದಿರಲಿಲ್ಲ. ಅವರ ಅರ್ಜಿಗಳನ್ನು ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಹೆಸರು ಮತ್ತು ಫೋನ್‌ ನಂಬರ್‌ ಬದಲಾಗಿ ಅವರ ಪತಿಯ ಫೋನ್‌ ನಂಬರ್‌ ನಮೂದಿಸಿರುವುದು ಪತ್ತೆಯಾಗಿತ್ತು. ಇದು ಸರಿಹೊಂದದ ಕಾರಣ ಅಂಥಾ ಅರ್ಜಿಗಳು ತಿರಸ್ಕೃತವಾಗಿದೆ ಎಂದರು. 
 
ಎಷ್ಟೋ ಕಡೆ ಅರ್ಜಿ ನೋಂದಣಿಗೆ ಸರ್ಕಾರ ಗುತ್ತಿಗೆ ಆಧಾರದ ಮೇಲೆ ನೇಮಿಸಿರುವ ಡಿಟಿಪಿ ಆಪರೇಟರ್‌ ಗಳು ತಮ್ಮ ಫೋನ್‌ ನಂಬರ್‌ ಅನ್ನೇ ನಮೂದಿಸಿರುವುದು ಕಂಡು ಬಂದಿದೆ ಎಂದು ಡಿಕೆಶಿ ಹೇಳಿದರು. ರಾಜ್ಯದಲ್ಲಿ 1.40 ಕೋಟಿ ಜನತೆ ವಾಸಿಸುತ್ತಿದ್ದಾರೆ. ಜನರು ಸರಿಯಾಗಿ ತೆರಿಗೆ ಪಾವತಿಸುವುದರಲ್ಲಿ ಅಕ್ರಮ ತೋರುತ್ತಿರುವುದು ಕಂಡು ಬಂದಿದೆ. ನಮ್ಮ ಸರ್ಕಾರ ಇದನ್ನು ನಿಖರವಾಗಿ ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಹೆಚ್ಚಳ ಮಾಡುತ್ತಿದೆ ಎಂದು ಡಿಕೆಶಿ ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಎಸ್‌.ಆರ್‌. ವಿಶ್ವನಾಥ್‌, ಶಾಸಕ ಮುನಿರಾಜು, ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ