ಜನಾರ್ಧನ ರೆಡ್ಡಿ ಮಗಳ ಮದುವೆ ವಿಷಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿರುವ ಸಂಪತ್ತನ್ನು ನಾಲ್ಕು ಗೋಡೆಯ ಒಳಗೆ ಇಟ್ಟುಕೊಂಡು ಅನುಭವಿಸಬೇಕು. ನಾನೊಬ್ಬ ಧನಿಕ ಎಂದು ಸಮಾಜದ ಎದುರು ಪ್ರದರ್ಶನ ಮಾಡಿಕೊಳ್ಳುವುದು ಸರಿಯಲ್ಲ. ನಮ್ಮ ಆಸ್ತಿಯನ್ನು ನಮ್ಮ ಮಕ್ಕಳಿಗೆ ಬಿಟ್ಟು ಹೋಗಬೇಕು. ಅದು ನಿಜವಾದ ತಂದೆಯ ಆದರ್ಶ. ಆದರೆ, ಜನಾರ್ಧನ ರೆಡ್ಡಿ ಅವರ ಅಪ್ಪ-ಅಮ್ಮನ ಬಳಿ ಇಲ್ಲದ ಆಸ್ತಿ ಇವರಲ್ಲಿ ಹೇಗೆ ಬಂತು ಎನ್ನುವ ಪ್ರಶ್ನೆಗೆ ಎಲ್ಲರಿಗೂ ಉತ್ತರ ದೊರಕಿದೆ ಎಂದು ಕಿಡಿಕಾರಿದರು.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಅವರವರದ್ದೇ ಆದ ಸ್ವತಂತ್ರ ಬದುಕು ಇರುತ್ತದೆ. ನಾನು ತುಂಬಾ ಸ್ವಾಭಿಮಾನಿ ವ್ಯಕ್ತಿ. ಯಾರದ್ದೇ ಮದುವೆಯಾದರೂ ಸರಿಯೇ ಇಷ್ಟೊಂದು ಆಡಂಬರದಲ್ಲಿ ಕೂಡಿರುತ್ತದೆ ಎಂದರೆ ನಾನು ಅಲ್ಲಿ ಕಾಲನ್ನು ಸಹ ಇಡುವುದಿಲ್ಲ. ಅದು ಸಹೋದ್ಯೋಗಿಗಳದ್ದಾಗಿರಲಿ, ನೆಂಟರಿಸ್ಟರದ್ದಾಗಲಿ. ಅಂತಹ ಮದುವೆಯನ್ನು ಸಾರಾಸಗಟವಾಗಿ ತಳ್ಳಿ ಹಾಕುತ್ತೇನೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿಯೇ ನಾನು ತೀರಾ ಸರಳವಾಗಿ ಮದುವೆಯಾಗಿದ್ದೇನೆ. ಹಾಗಿದ್ದಾಗ ನಾಗರಿಕ ಸಮಾಜಕ್ಕೆ ಮಾಡುವ ಅಪಮಾನದ ಮದುವೆಗೆ ನಾನು ಖಂಡಿತ ಹೋಗಲಾರೆ. ಸ್ವಾಭಿಮಾನ ಇರುವ ಯಾರೊಬ್ಬರೂ ಆ ಮದುವೆಯ ಅಂಗಳಕ್ಕೆ ಕಾಲಿಡುವುದಿಲ್ಲ ಎಂದು ಸಚಿವ ರಮೇಶಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನನಗೂ ಸಂಪತ್ತು ಇದೆ. ಹಾಗಂತ ಎಂದೂ ಅದನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟಿಲ್ಲ. ವೈಭವದ ಮದುವೆಗಳಿಗೆ ಕಡಿವಾಣ ಹಾಕಬೇಕೆಂದು ಮೊತ್ತ ಮೊದಲ ಬಾರಿಗೆ ವಿಧಾನ ಸಭೆಯಲ್ಲಿ ಖಾಸಗಿ ವಿಧೇಯಕ ಮಂಡಿಸಿದ ವ್ಯಕ್ತಿಯೇ ನಾನು. ಆದರೆ, ಅದು ಚರ್ಚೆಗೆ ಬರದೆ ಹಾಗೆಯೇ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.