ಬಸನಗೌಡ ಪಾಟೀಲ ಯತ್ನಾಳರೊಂದಿಗೆ ಯಡಿಯೂರಪ್ಪ ಗೌಪ್ಯ ಮಾತುಕತೆ

ಸೋಮವಾರ, 27 ನವೆಂಬರ್ 2017 (13:35 IST)
ಬಿಜೆಪಿ ಉಚ್ಚಾಟನೆಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಳ ಯತ್ನಾಳ ಅವರೊಂದಿಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ವಿಜಯಪುರದ ಪ್ರವಾಸಿ ಮಂದಿರದಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ಯಡಿಯೂರಪ್ಪ ಅವರಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುವ ಇಂಗಿತವನ್ನು ಬಸನಗೌಡ ಪಾಟೀಲ ವ್ಯಕ್ತಪಡಿಸಿದ್ದು, ಆದ್ದರಿಂದ ಪಕ್ಷದಿಂದ ಮಾಡಿರುವ ಉಚ್ಚಾಟನೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸೇರ್ಪಡೆಗೊಳ್ಳಲು ದೆಹಲಿ ಹಾಗೂ ಬೆಂಗಳೂರು ಕಡೆಯಿಂದ ಅನುಮತಿ ದೊರೆತಿದ್ದು, ಹುಬ್ಬಳ್ಳಿ ಕಡೆಯಿಂದ ಮಾತ್ರ ತೊಂದರೆಯಾಗಿದೆ. ಸದ್ಯದಲ್ಲೇ ಎಲ್ಲ ಬಗೆಹರಿಯಲಿದ್ದು, ಬಿಜೆಪಿ ಸೇರ್ಪಡೆ ಖಚಿತ ಎಂದು ಬಸನಗೌಡ ಪಾಟೀಲ ಹೇಳಿದ್ದಾರೆ.
ಬಿಜೆಪಿ ಸೇರ್ಪಡೆಗೆ ಯಾರೇ ವಿರೋಧ ಪಡಿಸಿದರೂ ಅವರನ್ನು ಸಮಾಧಾನ ಪಡಿಸಿ, ನಿಮ್ಮನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಯಡಿಯೂರಪ್ಪ ಸಲಹೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ