ಪ್ರೇಯಸಿ ನೀಡಿದ್ದ ಮೊಬೈಲ್ ಕದ್ದನೆಂದು ಗೆಳೆಯನ ಹತ್ಯೆ

ಮಂಗಳವಾರ, 31 ಜನವರಿ 2017 (11:32 IST)
ತನ್ನ ಪ್ರೇಯಸಿ ನೀಡಿದ್ದ ಮೊಬೈಲ್ ಕದ್ದನೆಂಬ ಸಂಶಯದಲ್ಲಿ ಇಬ್ಬರು ಸೇರಿಕೊಂಡು ಗೆಳೆಯನನ್ನು ಬರ್ಬರವಾಗಿ ಹತ್ಯೆಗೈದ ಕರಾಳ ಘಟನೆ ಬೆಳಗಾವಿಯಲ್ಲಿ ನಡೆದಿದೆ. 
ಕೊಲೆಯಾದ ದುರ್ದೈವಿಯನ್ನು ವೈಭವ ನಗರದ ನಿವಾಸಿ ನಾಸೀರ್ ಅಹ್ಮದ್ ಫಿರ್ಜಾದೆ ಎಂದು ಗುರುತಿಸಲಾಗಿದೆ. ಸ್ನೇಹಿತರಾದ ಇಮ್ರಾನ್ ಅಕ್ಬರ್ ಖಾನ್ ಮತ್ತು ಜಿನೇಂದ್ರ ಬಿಲ್ ಸೇರಿಕೊಂಡು ಆತನನ್ನು ಕೊಲೆಗೈದಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ. 
 
ಘಟನೆಯ ವಿವರ: ಲಾರಿ ಚಾಲಕನಾಗಿರುವ ನಾಸೀರ್, ಕೂಲಿ ಕಾರ್ಮಿಕ ಇಮ್ರಾನ್ ಮತ್ತು ಆಟೋ ಚಾಲಕನಾಗಿರುವ ಜಿನೇಂದ್ರ ಅವರ ನಡುವೆ ಕೆಲ ತಿಂಗಳಿಂದ ಸ್ನೇಹವಿತ್ತು. ಜನವರಿ 27ರಂದು ಮೂವರು ಸ್ನೇಹಿತರು ಮದ್ಯದ ಪಾರ್ಟಿ ನಡೆಸಿದ್ದು, ಈ ಸಮಯದಲ್ಲಿ ಇಮ್ರಾನ್ ಮೊಬೈಲ್ ಕಳುವಾಗಿದೆ. ಪ್ರೇಯಸಿ ಉಡುಗೊರೆಯಾಗಿ ಕೊಟ್ಟಿದ್ದ ಮೊಬೈಲ್ ಕಾಣದಾದಾಗ ಇಮ್ರಾನ್ ಕೋಪ ನೆತ್ತಿಗೇರಿದೆ. ಗೆಳೆಯ ನಾಸೀರ್ ಅದನ್ನು ಕದ್ದಿದ್ದಾನೆ ಎಂದುಕೊಂಡ ಆತ ಜಗಳಕ್ಕೀಳಿದ್ದಾನೆ. ಕುಡಿದ ಮತ್ತಿನಲ್ಲಿದ್ದ ನಾಸೀರ್ ಕೂಡ ಹೌದು ನಾನೇ ನಿನ್ನ ಮೊಬೈಲ್ ಕದ್ದಿರೋದು, ಕೊಡುವುದಿಲ್ಲ, ಏನು ಮಾಡುತ್ತೀನಿ ಎಂದು ಕೂಗಾಡಿದ್ದಾನೆ.  
 
ನಾಸೀರ್‌ನೇ ತನ್ನ ಮೊಬೈಲ್ ಕದ್ದಿದ್ದಾನೆ ಎಂದು ಬಲವಾಗಿ ನಂಬಿದ ಇಮ್ರಾನ್ ಕುಡಿದ ಮತ್ತಿನಲ್ಲಿ ಆತನನ್ನು ಕೊಲ್ಲಲು ನಿರ್ಧರಿಸಿದ್ದು ಗೆಳೆಯ ಜಿನೇಂದ್ರನ ಆಟೋದಲ್ಲಿ ಆತನನ್ನು ಕರೆದೊಯ್ದು ಕಲ್ಲಿನಿಂದ ಹತ್ಯೆಗೈದು ಕಂಚಾನಟ್ಟಿ ಬಳಿ ಶವವನ್ನು ಎಸೆದು ಬಂದಿದ್ದಾರೆ. 
 
ಸ್ಥಳೀಯರು ನೀಡಿದ ಸುಳಿವಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿಚಾರಣೆಯನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ