ತರುಣಿ, ಹೆತ್ತವರ ಅಕ್ರಮ ಬಂಧನ: ರಾಹುಲ್ ಗಾಂಧಿಗೆ ನೋಟಿಸ್

ಬುಧವಾರ, 2 ಮಾರ್ಚ್ 2011 (12:41 IST)
ತರುಣಿ ಮತ್ತಾಕೆಯ ಹೆತ್ತವರನ್ನು 2007ರಿಂದಲೂ ಅಕ್ರಮ ಬಂಧನದಲ್ಲಿಟ್ಟಿರುವ ದೂರಿನ ಆಧಾರದಲ್ಲಿ ಅಲಹಾಬಾದ್ ಹೈಕೋರ್ಟಿನ ಲಖ್ನೋ ಪೀಠವು ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ.

24ರ ಹರೆಯದ ಸುಕನ್ಯಾ ದೇವಿ, ಆಕೆಯ ತಂದೆ ಬಲರಾಂ ಸಿಂಗ್ ಮತ್ತು ತಾಯಿ ಸುಮಿತ್ರಾ ದೇವಿ ಅವರ ಪರವಾಗಿ ಮಧ್ಯ ಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್ರಿತೆ ಎಂಬವರು ಈ ಕುರಿತು ಹೇಬಿಯಸ್ ಕಾರ್ಪಸ್ ದೂರು ಸಲ್ಲಿಸಿದ್ದು, ಉತ್ತರಿಸುವಂತೆ ನ್ಯಾಯಮೂರ್ತಿ ಶ್ರೀ ನಾರಾಯಣ ಶುಕ್ಲಾ ಅವರು ಆದೇಶ ನೀಡಿದ್ದಾರೆ.

2007ರ ಜನವರಿ 4ರಿಂದೀಚೆಗೆ ಅರ್ಜಿದಾರರಾದ ಸುಕನ್ಯಾ ದೇವಿ ಮತ್ತು ಹೆತ್ತವರು ರಾಹುಲ್ ಗಾಂಧಿಯ ಅಕ್ರಮ ಬಂಧನದಲ್ಲಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ತಕ್ಷಣವೇ ಈ ತರುಣಿ ಮತ್ತಾಕೆಯ ಹೆತ್ತವರನ್ನು ನ್ಯಾಯಾಲಯದೆದುರು ಹಾಜರುಪಡಿಸಿ, ಅವರನ್ನು ಬಂಧಮುಕ್ತಗೊಳಿಸುವಂತೆ ಕಾಂಗ್ರೆಸ್ ನಾಯಕನಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಕೆಲವೊಂದು ಸುದ್ದಿ ವೆಬ್‌ಸೈಟುಗಳಿಂದ ಈ ಕುರಿತು ತಿಳಿದು ತಾನು ಮಧ್ಯಪ್ರದೇಶದ ಬಾಲಘಾಟ್‌ನಿಂದ ಅಮೇಥಿಗೆ ಬಂದು ನೋಡಿದೆ. ಅಲ್ಲಿ ಈ ಕುಟುಂಬದ ಮನೆಗೆ ಬೀಗ ಜಡಿಯಲಾಗಿತ್ತು. ಸ್ಥಳೀಯ ಗ್ರಾಮಸ್ಥರು ಕೂಡ ಅವರೆಲ್ಲಿದ್ದಾರೆ ಎಂಬ ಕುರಿತು ಬಾಯಿ ಬಿಡುತ್ತಿಲ್ಲವಾದುದರಿಂದ, ತಾನು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದಾಗಿ ಶಾಸಕ ಕಿಶೋರ್ ಸಮ್ರಿತೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ