ಇಸ್ಲಾಮಾಬಾದ್: ಉಗ್ರರ ನೆಲೆಯ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ ಬಳಿಕ, ಭಾರತದ ವಿರುದ್ಧ ಕೆಂಡ ಕಾರುತ್ತಿರುವ ಪಾಕಿಸ್ತಾನ ಇದೀಗ, ತನ್ನ ದೇಶದಲ್ಲಿ ವಿಧ್ವಂಸಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ದೇಶ ತೊರೆಯಲು ಸೂಚಿಸಿದೆ.
ಅಂತರಾಷ್ಟ್ರೀಯ ಸಮುದಾಯದಲ್ಲಿ ತನ್ನ ಮಾನ ಹರಾಜಾದ ಹಿನ್ನೆಲೆಯಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ ಮತ್ತಷ್ಟು ಕತ್ತಿ ಮಸೆಯುತ್ತಿದೆ. ಜಮ್ಮು ಗಡಿ ಪ್ರದೇಶದಲ್ಲಿ ಪ್ರತಿನಿತ್ಯ ಕದನ ವಿರಾಮ ಉಲ್ಲಂಘಿಸಿ ಸೇನೆಯ ಮೇಲೆ ಗುಂಡುನ ದಾಳಿ ನಡೆಸುತ್ತ ತನ್ನ ದುಷ್ಟ ಬುದ್ಧಿಯನ್ನು ತೋರ್ಪಡಿಸುತ್ತಿದೆ. ಸಾಲದೆಂಬಂತೆ ಗಡಿ ಪ್ರದೇಶದ ನಿವಾಸಿಗಳ ಮೇಲೂ ಶೆಲ್ ದಾಳಿ ನಡೆಸಿ, ಮುಗ್ಧ ಜನರ ಸಾವಿನಲ್ಲೂ ಕೇಕೇ ಹಾಕುತ್ತಿವೆ. ಶೇಡಿನ ಹೋರಾಟ ನಡೆಸುತ್ತಿರುವ ಪಾಕಿಸ್ತಾನ ಇದೀಗ, ಭಾರತೀಯ ರಾಯಭಾರಿ ಅಧಿಕಾರಿಗಳ ಮೇಲೆಯೇ ಆರೋಪ ಹೊರಸಿ ತನ್ನ ಬುದ್ಧಿ ಪ್ರದರ್ಶಿಸುತ್ತಿದೆ.
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ವಾಣಿಜ್ಯ ಸಲಹೆಗಾರ ರಾಜೇಶ್ ಅಗ್ನಿಹೋತ್ರಿ ಹಾಗೂ ಮಾಧ್ಯಮ ಸಲಹೆಗಾರ ಬಲಬೀರ್ ಸಿಂಗ್ ಅವರನ್ನು ಭಾರತಕ್ಕೆ ತೆರಳಲು ಸೂಚಿಸಿದೆ. ಈ ಇಬ್ಬರು ಅಧಿಕಾರಿಗಳ ಭಾವಚಿತ್ರವು ಪಾಕ್ ನ ವಿವಿಧ ಚಾನೆಲ್ಗಳಲ್ಲಿ ಪ್ರಸಾರವಾಗಿದೆ. ಭಾರತೀಯ ತನಿಖಾ ಸಂಸ್ಥೆ 'ರಾ' ಜೊತೆ ಇವರಿಬ್ಬರು ಸಂಬಂಧ ಹೊಂದಿದ್ದು, ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ.