ಒಂದೇ ಕ್ಷೇತ್ರಕ್ಕೆ 89 ಕೋಟಿ ರೂ. ಹಂಚಿಕೆ..? ಸ್ಫೋಟಕ ಮಾಹಿತಿ ಬಹಿರಂಗ

ಶನಿವಾರ, 8 ಏಪ್ರಿಲ್ 2017 (19:14 IST)
ಉಪಚುನಾವಣೆಯ ಒಂದೇ ಕ್ಷೇತ್ರಕ್ಕೆ 89 ಕೋಟಿ ರೂ ಹಂಚಿಕೆ. ಯಾವ ಕ್ಷೇತ್ರಕ್ಕೆ ಗುಂಡ್ಲುಪೇಟೆಗಾ..? ನಂಜನಗೂಡಿಗಾ? ಎಂಬ ಪ್ರಶ್ನೆ ನಿಮ್ಮನ್ನ ಕಾಡುತ್ತಿದ್ದರೆ. ಅದಕ್ಕೆ ಉತ್ತರ ಈ ಎರಡೂ ಕ್ಷೇತ್ರಗಳೂ ಅಲ್ಲ. ತಮಿಳುನಾಡಿನ ಆರ್.ಕೆ. ನಗರ ಕ್ಷೇತ್ರಕ್ಕೆ. ಹೌದು, ಐಟಿ ಇಲಾಖೆ ದಾಳಿ ವೇಳೆ ಇಂಥದ್ದೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ ಎಂದು ವರದಿಯಾಗಿದೆ.

ಜಯಲಲಿತಾ ನಿಧನದ ಬಳಿಕ ತೆರವಾಗಿದ್ದ ಚೆನ್ನೈನ ಆರ್.ಕೆ. ನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ಮಾಹಿತಿ ಆಧರಿಸಿ ಆರೋಗ್ಯ ಸಚಿವ ವಿಜಯ ಭಾಸ್ಕರ್ ಮತ್ತು ನಟ ಶರತ್ ಕುಮಾರ್ ನಿವಾಸ ಸೇರಿ 30 ಕಡೆ ಐಟಿ ದಾಳಿ ನಡೆದಿತ್ತು. ಈ ಸಂದರ್ಭ ಐಟಿ ಅಧಿಕಾರಿಗಳಿಗೆ ಈ ಸ್ಫೋಟಕ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಚುನಾವಣೆಯಲ್ಲಿ ಹಂಚಲು 89 ಕೋಟಿ ರೂ. ತರಲಾಗಿದ್ದು, 6 ಸಚಿವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಆದಾಯ ತೆರಿಗೆ ಇಲಾಖೆ ಈ ಮಾಹಿತಿಯನ್ನ ಚುನಾವಣಾ ಆಯೋಗಕ್ಕೂ ರವಾನಿಸಿದ್ದು, ಏಪ್ರಿಲ್ 12ರಂದು ನಡೆಯಬೇಕಿರುವ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ