ಅತ್ಯಾಚಾರ ಆರೋಪಿಗೆ ಸಾರ್ವಜನಿಕವಾಗಿ ಚಪ್ಪಲಿ ಏಟು ನೀಡಿದ ತೃಪ್ತಿ ದೇಸಾಯಿ
ಗುರುವಾರ, 28 ಜುಲೈ 2016 (16:13 IST)
ಸಾಮಾಜಿಕ ಕಾರ್ಯಕರ್ತೆ, ಭೂಮಾತಾ ಬ್ರಿಗೇಡ್ನ ತೃಪ್ತಿ ದೇಸಾಯಿ ಅತ್ಯಾಚಾರ ಆರೋಪಿಗೆ ಸಾರ್ವಜನಿಕವಾಗಿ ಥಳಿಸುವುದರ ಮೂಲಕ ಸುದ್ದಿಯಲ್ಲಿದ್ದಾರೆ. ಈ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಪುಣೆ ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ ಮದುವೆಯಾಗುವುದಾಗಿ ಹೇಳಿ ವಂಚಿಸಿರುವ ಆರೋಪ ಹೊತ್ತಿರುವ 25 ವರ್ಷದ ಯುವಕನಿಗೆ ದೇಸಾಯಿ ಸಾರ್ವಜನಿಕವಾಗಿ ಚಪ್ಪಲಿ ಏಟು ನೀಡಿದ್ದಾರೆ. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ದೇಸಾಯಿ ತಾವೇ ಮೊದಲು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭೂಮಾತಾ ಬ್ರಿಗೇಡ್ನ ಇನ್ನೊಬ್ಬ ಸದಸ್ಯೆ ಅವರಿಗೆ ಸಾಥ್ ನೀಡಿದ್ದು ಘಟನೆ ನಡೆಯುವಾಗ ಸಾರ್ವಜನಿಕರು ಸುತ್ತುವರೆದು ವೀಕ್ಷಿಸಿದ್ದಾರೆ.
ಆರೋಪಿ ಯುವಕನನ್ನು ಶ್ರೀಕಾಂತ್ ಲೋಂಧೆ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಆತ 24 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ. ಆಕೆ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದ. ಆತನ ತಂದೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಆದರೆ ಅವರು ಹಣ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರು. ಆತನಿಗೆ ತಕ್ಕ ಪಾಠ ಕಲಿಸಲು ಈ ಕೃತ್ಯವೆಸಗಿರುವುದಾಗಿ ಎಂದು ದೇಸಾಯಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.