ಜಯಲಲಿತಾ ಸಾವಿನ ಬೆನ್ನಲ್ಲೇ ತಮಿಳುನಾಡಿಗೆ ನೂತನ ಮುಖ್ಯಮಂತ್ರಿ

ಮಂಗಳವಾರ, 6 ಡಿಸೆಂಬರ್ 2016 (14:46 IST)
ಚೆನ್ನೈ: ಜಯಲಲಿತಾ ನಿಧನರಾದ ಕೆಲವೇ ಗಂಟೆಗಳಲ್ಲಿ ತಮಿಳುನಾಡಿಗೆ ನೂತನ ಮುಖ್ಯಮಂತ್ರಿಯಾಗಿ ಒ. ಪನ್ನೀರ್ ಸೆಲ್ವಂ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಗೆ ರಾಜಭವನದಲ್ಲಿ ಅವರು ಇತರ ಸಂಪುಟ ಸದಸ್ಯರೊಂದಿಗೆ ಅಧಿಕಾರ ಸ್ವೀಕರಿಸಿದರು.

ರಾಜಭವನಕ್ಕೆ ತೆರಳಿದ ಎಲ್ಲಾ ಎಐಎಡಿಎಂಕೆ ಪಕ್ಷದ ಸದಸ್ಯರು ಪನ್ನೀರ್ ಸೆಲ್ವಂ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿರುವುದಾಗಿ ಸಹಿ ಹಾಕಿದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದರು. ನಂತರ ಜಯಲಲಿತಾ ಅವರ ಆಪ್ತ ಸೆಲ್ವಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಹಿಂದೆ ಜಯಲಲಿತಾ ವಿವಿಧ ಕಾರಣಕ್ಕೆ ಅಧಿಕಾರ ತ್ಯಾಗ ಮಾಡಬೇಕಾಗಿ ಬಂದಾಗ ಸೆಲ್ವಂ ಜಯಲಲಿತಾ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇದೀಗ ತಮ್ಮ ಮೆಚ್ಚಿನ ನಾಯಕಿಯ ನಿಧನದ ನಂತರ ಆ ಸ್ಥಾನಕ್ಕೆ ಅವರು ಬಂದಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿ ಅಧಿಕಾರ ಸ್ವೀಕರಿಸುವಾಗ ಸೆಲ್ವಂ ಭಾವುಕರಾಗಿ ಅಳಲಿಲ್ಲ. ಶಾಂತ ಚಿತ್ತರಾಗಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ