ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ

ಭಾನುವಾರ, 5 ಮಾರ್ಚ್ 2017 (10:20 IST)
ಕೇರಳದಲ್ಲಿ ಎಡ ಮತ್ತು ಬಲ ಪಂಥೀಯರ  ನಡುವಿನ ವೈಷಮ್ಯ ತಾರಕಕ್ಕೇರಿದ್ದು, ಆರ್‌ಎಸ್ಎಸ್ ಕಚೇರಿಯ ಮುಂದೆ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಮತ್ತೀಗ ಮೂವರು ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ದಾಳಿಯನ್ನು ನಡೆಸಲಾಗಿದೆ. 
ಕೇರಳದ ಕೋಝಿಕ್ಕೋಡ್‌ನಲ್ಲಿ ನಿನ್ನೆ ರಾತ್ರಿ ಈ ಹೇಯ ಕೃತ್ಯ ನಡೆದಿದ್ದು ಸಿಪಿಎಂ ಕಾರ್ಯಕರ್ತರೇ ಈ ದಾಳಿ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
 
ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 
 
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಆರ್.ಎಸ್.ಎಸ್ ನಾಯಕ ಕುಂದನ್ ಚಂದ್ರಾವತ್ ಘೋಷಿಸಿದ ಬೆನ್ನಲ್ಲೇ ಕೋಝಿಕ್ಕೋಡ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ ಬಾಂಬ್ ಎಸೆಯಲಾಗಿತ್ತು. ಘಟನೆಯಲ್ಲಿ ಮೂವರು ಆರ್‌ಎಸ್ಎಸ್ ಕಾರ್ಯಕರ್ತರು ಗಾಯಗೊಂಡಿದ್ದರು. 
 
ಕೋಝಿಕ್ಕೋಡ್ ಆರ್.ಎಸ್.ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಈ ಕುರಿತು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ದಾಳಿ ನಡೆದಿತ್ತು. ಅಷ್ಟೇ ಅಲ್ಲದೆ ಕೋಝಿಕ್ಕೋಡ್ ಸಿಪಿಐಎಂ ಕಚೇರಿಗೂ ದುಷ್ಕರ್ಮಿಗಳು ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದರು.

ವೆಬ್ದುನಿಯಾವನ್ನು ಓದಿ