ರಾಹುಲ್ ಗಾಂಧಿ ‘ಅಪಶಕುನ’ ಟಾಂಗ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬಿಜೆಪಿ

ಗುರುವಾರ, 23 ನವೆಂಬರ್ 2023 (11:35 IST)
ಜೈಪುರ: ರಾಜಸ್ಥಾನ್ ನಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆ ಎಂದ ಮೇಲೆ ರಾಜಕೀಯ ನಾಯಕರ ಹೇಳಿಕೆಗಳ ಕದನ ಜೋರಾಗಿಯೇ ನಡೆಯುತ್ತಿರುತ್ತದೆ.

ರಾಜಸ್ಥಾನ್ ನಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಸೋಲಲು ಅಪಶಕುನ (ಪನೌತಿ)ದ ನಾಯಕ ಅಲ್ಲಿ ಇದ್ದಿದ್ದೇ ಕಾರಣ ಎಂದು ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದರು. ಅಲ್ಲದೆ ಮೋದಿಯನ್ನು ಜೇಬುಗಳ್ಳರಿಗೆ ಹೋಲಿಸಿದ್ದರು. ಆ ಮೂಲಕ ಮೋದಿ ಕಾಲಿಟ್ಟಲ್ಲೆಲ್ಲಾ ಸೋಲು ಎಂದು ಕುಹುಕವಾಡಿದ್ದರು.

ನಿನ್ನೆ ಇದೇ ಮಾತನ್ನು ಮತ್ತೆ ರಾಹುಲ್ ಸಹೋದರಿ ಪ್ರಿಯಾಂಕಾ ವಾದ್ರಾ ಕೂಡಾ ಚುನಾವಣಾ ರ್ಯಾಲಿಯಲ್ಲಿ ಪುನರುಚ್ಚರಿಸಿದ್ದಾರೆ. ಪ್ರಧಾನಿ ಮೋದಿ ಹೋಗಿದ್ದಕ್ಕೇ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಸೋತಿದ್ದು ಎಂದಿದ್ದರು.

ಇದು ಬಿಜೆಪಿ ಪಾಳಯದ ಆಕ್ರೋಶಕ್ಕೆ ಕಾರಣವಾಗಿದೆ. ಇದು ಪ್ರಧಾನಿ ಹುದ್ದೆಗೆ ಮಾಡಿದ ಅವಮಾನ. ಹೀಗಾಗಿ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಪಿಕ್ ಪಾಕೆಟರ್ ಎನ್ನುವುದು, ಅಪಶಕುನ ಎನ್ನುವುದು ಒಬ್ಬ ವ್ಯಕ್ತಿಯ ಮಾನಹಾನಿ ಮಾಡುವ ಮಾತುಗಳು. ಅಲ್ಲದೆ, ಒಬ್ಬ ಘನತೆಯನ್ನು ಹಾಳು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುವ ಮಾತುಗಳು ಇದಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ