ಸಿಎಂ ಸಹೋದರನ ಮನೆ ಮೇಲೆ ಸಿಬಿಐ ದಾಳಿ?

ಶುಕ್ರವಾರ, 17 ಜೂನ್ 2022 (15:14 IST)
ಜೈಪುರ : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಮನೆ ಮೇಲೆ ಇಂದು ಕೇಂದ್ರ ತನಿಖಾ ದಳವು (ಸಿಬಿಐ) ದಾಳಿ ನಡೆಸಿದೆ.

ಭ್ರಷ್ಟಾಚಾರ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ. ತನಿಖಾ ಸಂಸ್ಥೆ ತಂಡವು ಅಗ್ರಸೇನ್ ಗೆಹ್ಲೋಟ್ ಅವರಿಗೆ ಸಂಬಂಧಿಸಿದ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ರಸಗೊಬ್ಬರ ರಫ್ತು ಪ್ರಕರಣದ ಆರೋಪ ಹೊತ್ತಿರುವ ಅಗ್ರಸೇನ್ ಗೆಹ್ಲೋಟ್ ಈಗಾಗಲೇ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಟ್ಟಿದ್ದಾರೆ. 2007 ಮತ್ತು 2009ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರವನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಇಡಿ ಆರೋಪಿಸಿತ್ತು.

ರಸಗೊಬ್ಬರ ಪ್ರಕರಣದಲ್ಲಿ ಸರಾಫ್ ಇಂಪೆಕ್ಸ್ ಕಂಪನಿ ಸೇರಿದಂತೆ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದೆ. ಅಗ್ರಸೇನ್ ಗೆಹ್ಲೋಟ್ ಒಡೆತನದ ಸಂಸ್ಥೆಯಾದ ಅನುಪಮ್ ಕೃಷಿ, ಸರಾಫ್ ಇಂಪೆಕ್ಸ್ ಮೂಲಕ ಪೊಟ್ಯಾಷ್ ರಫ್ತು ಮಾಡಲಾಗಿತ್ತು. ರಫ್ತು ಮಾಡಿದ ರಸಗೊಬ್ಬರವು ರಾಜಸ್ಥಾನದ ರೈತರಿಗೆ ಮೀಸಲಾಗಿತ್ತು ಎಂದು ಇಡಿ ಹೇಳಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ