ಕೇಂದ್ರ ರೈಲ್ವೆ, ಗೃಹ ಸಚಿವರನ್ನ ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಮಾತುಕತೆ

ಗುರುವಾರ, 17 ಆಗಸ್ಟ್ 2017 (14:11 IST)
ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
 

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಐದು ವರ್ಷದಲ್ಲಿ ಎಸ್ಟಿಆರ್ಎಫ್ ಕಡೆಯಿಂದ 1527 ಕೋಟಿ ರೂ. ನೀಡಲಾಗಿದೆ. ನಮ್ಮ ಮಾದರಿಯಲ್ಲೇ ಇರುವ ಮಹಾರಾಷ್ಟ್ರಕ್ಕೆ 8 ಸಾವಿರ ಕೋಟಿ ರೂ. ನೀಡಲಾಗಿದೆ. ಆಂಧ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶಕ್ಕೆ ಹೆಚ್ಚು ಹಣ ನೀಡಲಾಗಿದೆ. ನಮಗೂ ಇನ್ನಷ್ಟು ಹಣ ಬಿಡುಗಡೆ ಮಾಡುವಂತೆ ಕೋರಿದ್ದೇನೆ ಎಂದರು.

ಇದಕ್ಕೂ ಮುನ್ನ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ರಾಜ್ಯದ ರೈಲ್ವೆ ಯೋಜನೆಗಳ ಕುರಿತು ಮಾತುಕತೆ ನಡೆಸಿದರು.. ಕೇಂದ್ರ ಸಚಿವ ಸುರೇಶ್ ಪ್ರಭು ಅವರೊಂದಿಗೆ ವಿವಿಧ ರೈಲು ಯೋಜನೆಗಳ ಕುರಿತು ಮಾತುಕತೆ ನಡೆಸಿದ್ದೇನೆ 1998ರಲ್ಲಿಯೇ ಕೆ.ಆರ್. ಪುರ ರೈಲು ನಿಲ್ದಾಣ ಆರಂಭವಾಗಿತ್ತು. ಪರಿಸರ ಇಲಾಖೆ ಪರವಾನಗಿ ಸಿಗದೇ ನಿಂತು ಹೋಗಿತ್ತು. ಈಗ ಹೈಪವರ್ ಕಮಿಟಿ ಇದನ್ನು ಮರು ಆರಂಭಿಸುವಂತೆ ಸೂಚಿಸಿದೆ. ಇದಕ್ಕೆ ಆದಷ್ಟು ಬೇಗ ಕ್ಲಿಯರೆನ್ಸ್ ನೀಡಿ ಎಂದು ಕೇಳಿದ್ದೇವೆ.

ಮೈಸೂರು ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಿ ಎಂದು ಕೇಳಿದ್ದೇವೆ. ದೊಡ್ಡದಾಗಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವಂತೆ ಕೇಳಿದ್ದೇವೆ ಎಂದರು.

ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಆರಂಭಿಸಲು ಕೋರಲಾಗಿದೆ. ಅದಕ್ಕೆ ನಿಮ್ಮ ಅಧಿಕಾರಿಗಳ ಜತೆ ನಮ್ಮ ಅಧಿಕಾರಿಗಳು ಚರ್ಚಿಸುತ್ತಾರೆ. ಅದಾದ ನಂತರ ಒಂದು ವರದಿ ಸಲ್ಲಿಕೆ ಅಗಲಿದೆ. ಅದರ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಎಂದು ವಿವರಿಸಿದರು.

ಕೋಲಾರ ರೈಲು ಬೋಗಿ ಕಾರ್ಖಾನೆ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ, ಮೈಸೂರು ರೈಲು ಟರ್ಮಿನಲ್ ವಿಸ್ತರಣೆ, ಹೆಚ್ಚುವರಿ ಹೈಸ್ಪೀಡ್ ರೈಲು, ಬೆಂಗಳೂರು- ಮೈಸೂರು-ಬೆಂಗಳೂರು ಹೆಚ್ಚುವರಿ ಉಪನಗರ ರೈಲು, ಹೆಚ್ಚುವರಿ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಕಲಬುರುಗಿ ರೈಲು ವ್ಯವಸ್ಥೆ, ಬೆಂಗಳೂರು-ವೈಟ್ಫೀಲ್ಡ್ ನಡುವೆ ನಾಲ್ಕು ಜೋಡಿ ರೈಲು ಮಾರ್ಗ ನಿರ್ಮಾಣ, ಬೆಂಗಳೂರಿನ ಕಂಟೋನ್ಮೆಂಟ್, ಯಶವಂತಪುರ, ಯಲಹಂಕ ರೈಲು ನಿಲ್ದಾಣಗಳ ಅಭಿವೃದ್ಧಿ, ರಾಜ್ಯದಲ್ಲಿ ಆಯ್ಕೆಯಾದ 72 ನಿಲ್ದಾಣಗಳನ್ನು ರೂಫ್ಟಾಪ್ ಸೋಲಾರ್ ಪ್ಲೇಟ್ ಅಳವಡಿಸುವ ವಿಚಾರ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ರೈಲ್ವೆ ಯಾತ್ರಿನಿವಾಸ್, ಮಂಗಳೂರಿನಲ್ಲಿ 25 ಕಿ.ಮಿ. ರೈಲ್ವೆ ಮಾರ್ಗವನ್ನು ದಕ್ಷಿಣ ರೈಲ್ವೆಯಿಂದ ಸೌತ್ ವೆಸ್ಟರ್ನ್ ರೈಲ್ವೆವರೆಗೆ ವರ್ಗಾಯಿಸುವ ಹಾಗೂ ಯಾದಗಿರ್ ಬೋಗಿ ಕಾರ್ಖಾನೆ ಉದ್ಘಾಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ