ರೈಲಿಗೆ ತಲೆ ಕೊಟ್ಟ ಪ್ರೇಮಿಗಳು

ಸೋಮವಾರ, 6 ಜೂನ್ 2016 (08:42 IST)
ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಯುವ ಪ್ರೇಮಿಗಳಿಬ್ಬರು ತಮ್ಮ ಬದುಕಿಗೆ ದುರಂತ ಅಂತ್ಯ ನೀಡಿದ ಘಟನೆ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಚಾಕೂರ್‌ ರೈಲ್ವೆ ಸ್ಟೇಷನ್‌ ಬಳಿ ನಡೆದಿದೆ.

ರವಿವಾರ ಮಧ್ಯಾಹ್ನ 2 ಗಂಟೆಗೆ ಈ ಘಟನೆ ಸಂಭವಿಸಿದ್ದು, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳನ್ನು ತುಳಸೀರಾಮ್(38) ಹಾಗೂ ಅರ್ಚನಾ ಘುಗೆ(20) ಎಂದು ಗುರುತಿಸಲಾಗಿದೆ. ತುಳಸೀರಾಮ ವಿವಾಹಿತನಾಗಿದ್ದು ಅರ್ಚನಾ ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದಳು. ಆಕೆ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಳು. ಕಳೆ ವಾರ ಅವರಿಬ್ಬರ ಪ್ರೀತಿಯ ವಿಷಯ ಎರಡು ಕುಟುಂಬಸ್ಥರಿಗೂ ತಿಳಿದು ವಿರೋಧ ವ್ಯಕ್ತವಾಗಿತ್ತು. ಕಳೆದ ಐದು ದಿನಗಳಿಂದ ಪ್ರೇಮಿಗಳು ನಾಪತ್ತೆಯಾಗಿದ್ದು ಈಗ ಶವವಾಗಿ ಸಿಕ್ಕಿದ್ದಾರೆ. 
 
ಚಲಿಸುತ್ತಿರುವ ರೈಲಿನ ಮುಂದೆ ಜಿಗಿದ ತುಳಸೀರಾಮ್ ಶಿರ ಮತ್ತು ಮುಂಡ ಬೇರ್ಪಟ್ಟಿದ್ದು 20 ಮೀಟರ್ ದೂರ ಹೋಗಿ ಬಿದ್ದಿದೆ. ಮೃತ ಪಟ್ಟವರ ಬಳಿಯಲ್ಲಿ ಚಿನ್ನದ ಆಭರಣ, 3,000 ನಗದು ಮತ್ತು ಗುರುತಿನ ಚೀಟಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗುರುತಿನ ಚೀಟಿ  ಪೊಲೀಸರು ಶವದ ಗುರುತು ಪತ್ತೆ ಹಚ್ಚಲು ನೆರವಾಯಿತು.
 
ತಾವಿಬ್ಬರು ಒಂದಾಗಿ ಬದುಕಲು ಕುಟುಂಬಸ್ಥರು ಬಿಡುವುದಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಊಹಿಸಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ