ತುಮಕೂರು: ಸ್ಟೇಟಸ್ಗೆ ರೀಲ್ಸ್ಗೆ ಅಪ್ಲೋಡ್ ಮಾಡಿದ ವಿಚಾರವಾಗಿ ಪ್ರೇಮಿಗಳ ನಡುವೆ ನಡೆದ ಜಗಳ ಒಬ್ಬರ ಸಾವಿನಲ್ಲಿ ಅಂತ್ಯವಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ನೇಣಿಗೆ ಶರಣಾದ ಯುವತಿಯನ್ನು ಚೈತನ್ಯ (22) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ಅಂತಿಮ ವರ್ಷದ ಪದವಿ ಅಭ್ಯಾಸ ಮಾಡುತ್ತಿದ್ದ ಚೈತನ್ಯ ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ತನ್ನ ತಾಯಿ ಜತೆ ವಾಸವಾಗಿದ್ದಳು. ಅಲ್ಲದೇ ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪಕ್ಕದ ಊರಿನ ವಿಜಯ್ ಹಾಗೂ ಚೈತನ್ಯ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಸೋಮವಾರ ಚೈತನ್ಯ ರೀಲ್ಸ್ವೊಂದನ್ನು ಸ್ಟೇಟಸ್ನಲ್ಲಿ ಅಪ್ಲೋಡ್ ಮಾಡಿದ್ದಳು. ಇದನ್ನು ಪ್ರಶ್ನಿಸಲು ವಿಜಯ್, ಚೈತನ್ಯ ಮನೆ ಬಳಿ ಬಂದಿದ್ದಾನೆ. ಆಗ ಚೈತನ್ಯ ತಾಯಿ ಸೌಭಾಗ್ಯಮ್ಮ ರೂಂನಲ್ಲಿ ಇದ್ದರು. ತಾಯಿ ಇದ್ದ ರೂಂ ಬಾಗಿಲಿನ ಚಿಲಕ ಹಾಕಿ ಕಿಟಕಿ ಬಳಿ ಇಬ್ಬರು ಜಗಳವಾಡಿದ್ದಾರೆ.
ಆ ಬಳಿಕ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವಿಚಾರವನ್ನು ವಿಜಯ್ ಚೈತನ್ಯ ಸಂಬಂಧಿಗೆ ಕರೆ ಮಾಡಿ ತಿಳಿಸಿದ್ದಾನೆ. ಸಂಬಂಧಿ ಬಂದು ನೋಡಿದಾಗ ಚೈತನ್ಯ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೈತನ್ಯ ಸಾವಿಗೆ ವಿಜಯ್ ಕುಮಾರ ಕಾರಣ ಎಂದು ದೂರು ದಾಖಲಾಗಿದ್ದು, ಪ್ರಿಯಕರ ವಿಜಯ್ನನ್ನು ತುಮಕೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.