ಸೀಮಿತ ದಾಳಿಯ ಚರ್ಚೆ ಸೇನೆಗೆ ಅಪಮಾನ: ವೆಂಕಯ್ಯ ನಾಯ್ಡು

ಬುಧವಾರ, 5 ಅಕ್ಟೋಬರ್ 2016 (14:09 IST)
ಪಾಕಿಸ್ತಾನ ಆಕ್ರಮಿತ ಕಾಶ್ಮಿರದೊಳಗೆ ನುಗ್ಗಿ ಭಾರತೀಯ ಸೇನಾಪಡೆಗಳು ನಡೆಸಿದ ಸೀಮಿತ ದಾಳಿಯ ಸಾಕ್ಷ್ಯ ಕೇಳುವುದು ಭಾರತೀಯ ಸೇನೆಗೆ ಅಪಮಾನ ಮಾಡಿದಂತೆ ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
 
ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಕೂಡಾ ತನ್ನ ತಪ್ಪನ್ನು ತಿದ್ದಿಕೊಂಡು ಸಾಕ್ಷ್ಯ ಕೇಳುವ ನಾಯಕರಿಂದ ದೂರವಾಗಿದೆ. ಆಪ್ ಪಕ್ಷ ಕೂಡಾ ತನ್ನ ಹೇಳಿಕೆಯನ್ನು ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ. 
 
ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ಬಗ್ಗೆ ಯಾರೊಬ್ಬರಿಗೆ ಅನುಮಾನವಿಲ್ಲ. ಸೇನೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸೇನೆಯ ಸೀಮಿತ ದಾಳಿಯ ಬಗ್ಗೆ ಚರ್ಚೆ ಮಾಡುವುದೇ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಸೇನಾ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕರಾದ ರಣಬೀರ್ ಸಿಂಗ್ ಸ್ವತಃ ಮಾಧ್ಯಮಗಳಿಗೆ ಸೇನೆಯ ಸೀಮಿತ ದಾಳಿಯ ಬಗ್ಗೆ ಹೇಳಿಕೆ ನೀಡಿದ್ದಲ್ಲದೇ ಸರ್ವಪಕ್ಷಗಳ ಸಭೆಯಲ್ಲೂ ಮಾಹಿತಿ ನೀಡಿದ್ದಾರೆ ಎಂದರು.
 
ಭಾರತೀಯ ಸೇನಾಪಡೆಗಳು ಪಿಒಕೆ ಮೇಲೆ ನಡೆಸಿದ ದಾಳಿಯ ಬಗ್ಗೆ ದೇಶದ ಜನತೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ವಿಶ್ವ ಕೂಡಾ ಭಾರತ ತೆಗೆದುಕೊಂಡ ನಿಲುವನ್ನು ಪ್ರಶಂಸಿವೆ ಎಂದರು.
 
ಪಾಕಿಸ್ತಾನ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಮನಬಂದಂತೆ ಹೇಳಿಕೆ ನೀಡುತ್ತಿದೆ. ಭಾರತೀಯ ಸೇನೆಯಿಂದ ಹತರಾದ ಉಗ್ರರು ಪಾಕಿಸ್ತಾನ ನಾಗರಿಕರಾಗಿದ್ದರೂ ಅವರ ಅಂತ್ಯ ಸಂಸ್ಕಾರ ಮಾಡದ ಪರಿಸ್ಥಿತಿಯಲ್ಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಲೇವಡಿ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ