ಹೈದ್ರಾಬಾದ್-ಬೆಂಗಳೂರು ಬಸ್‌ನಲ್ಲಿ ಬೆಂಕಿ: 26 ಪ್ರಯಾಣಿಕರು ಸುರಕ್ಷಿತ

ಶುಕ್ರವಾರ, 7 ಜೂನ್ 2019 (15:46 IST)
ಹೈದ್ರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಹೈದ್ರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಲ್ಲೋ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್‌ನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದು ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಶಾರ್ಟ್‌ಸರ್ಕ್ಯೂಟ್‌ ಅಗ್ನಿ ಅಕಸ್ಮಿಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
 
ಹೈದ್ರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎನಗುಮರ್ರಿ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್‌ನಿಂದ ಇಳಿದು ಹೊರಬಂದಿದ್ದಾರೆ. ಆದರೆ, ಪ್ರಯಾಣಿಕರ ಬ್ಯಾಗ್‌ಗಳು ಸುಟ್ಟು ಬೂದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬಸ್‌ನ ಕೊನೆಯ ಸೀಟ್‌ನಲ್ಲಿದ್ದ ಪ್ರಯಾಣಿಕರು ಹೊಗೆಯೆಳುತ್ತಿರುವುದು ಕಂಡು ಚಾಲಕ ಅಂಜನೇಯಲುಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚಾಲಕ ಎಲ್ಲಾ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿಯುವಂತೆ ಕೋರಿದ್ದಾನೆ. ಬಸ್‌ನಲ್ಲಿದ್ದ ಪ್ರಯಾಣಿಕರ ಲ್ಯಾಪ್‌ಟಾಪ್, ಲಗೇಜ್‌ಗಳು ಸುಟ್ಟು ಭಸ್ಮವಾಗಿವೆ.
 
ಕೆಲ ಪ್ರಯಾಣಿಕರು ಮರಳಿ ಹೈದ್ರಾಬಾದ್‌ಗೆ ತೆರಳಿದರೆ, ಕೆಲ ಪ್ರಯಾಣಿಕರು ಬೇರೆ ಬಸ್ ಹಿಡಿದು ಬೆಂಗಳೂರಿಗೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮುಲಕಣ್ಣ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ