ಪ್ರಿಯಕರನಿಂದಲೇ ಹತ್ಯೆಯಾದ 17 ವರ್ಷದ ವಿದ್ಯಾರ್ಥಿನಿ

ಬುಧವಾರ, 13 ಸೆಪ್ಟಂಬರ್ 2017 (15:18 IST)
ನಗರದ ಹೊರವಲಯದಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು ಆಕೆಯ ಪ್ರಿಯಕರನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಗುರುತಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಮದೀನಾಗುಡದ ಅಮೀನ್‌ಪುರ್ ಬೆಟ್ಟದಲ್ಲಿ ವಿದ್ಯಾರ್ಥಿನಿ ಚಾಂದನಿ ಜೈನ್‌ ಕೊಳೆತ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ. ಮಾರನೇ ದಿನವೇ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಮಿಯಾಪುರ್ ಪ್ರದೇಶದ 17 ವರ್ಷದ ಬಾಲಕಿಯೊಬ್ಬಳು ಎರಡು ದಿನಗಳಿಂದ ಕಾಣೆಯಾಗಿದ್ದಳು. ಪೊಲೀಸರು ವಿದ್ಯಾರ್ಥಿನಿ ಕಾಣೆಯಾಗಿರುವುದಕ್ಕಾಗಿ ಅಪಹರಣ ಕೇಸ್ ದಾಖಲಿಸಿದ್ದರು.
 
ಪೊಲೀಸರು ಘಟನಾ ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಬಾಲಕಿ, ಹದಿಹರೆಯದ ಯುವಕನೊಂದಿಗೆ ಅಟೋರಿಕ್ಷಾದಿಂದ ಇಳಿದು ಪೊದೆಗಳತ್ತ ಸಾಗುತ್ತಿರುವುದು ಪತ್ತೆಯಾದ ನಂತರ ಪ್ರಕರಣ ಬಯಲಿಗೆ ಬಂದಿತ್ತು.  
 
ಯುವಕ ಸಾಯಿ ಕಿರಣ್, 6ನೇ ತರಗತಿಯಿಂದ 10ನೇ ತರಗತಿಯವರೆಗೆ ಹತ್ಯೆಯಾದ ವಿದ್ಯಾರ್ಥಿನಿಯ ಸಹಪಾಠಿಯಾಗಿದ್ದ. ಅಚ್ಚರಿಯ ವಿಷಯವೆಂದರೆ, ಹತ್ಯೆಯಾದ ಚಾಂದನಿ ಜೈನ್ ಪೋಷಕರನ್ನು ಸಂತೈಸಲು ಕೂಡಾ ಸಾಯಿ ಕಿರಣ್ ಅವರ ಮನೆಗೆ ತೆರಳಿದ್ದ ಎನ್ನಲಾಗಿದೆ.
 
ಕಳೆದ ಎರಡು ವರ್ಷಗಳಿಂದ ತಾವು ಪರಸ್ಪರ ಪ್ರೀತಿಸುತ್ತಿದ್ದೇವು. ಕೆಲ ತಿಂಗಳುಗಳಿಂದ ಅವಳಿಂದ ದೂರವಾಗಲು ಬಯಸಿದ್ದೆ. ಆದರೆ, ಆಕೆ, ಸಂಬಂಧ ಮುಂದುವರಿಸಿ ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಳು. ಆಕೆಯಿಂದ ದೂರವಾಗಲು ಆಕೆಯನ್ನು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಯುವಕ ಪೊಲೀಸರಿಗೆ ತಿಳಿಸಿದ್ದಾನೆ.
 
ಬಾಲಕಿಯನ್ನು ಅಮೀನಪುರ್ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ವಾಗ್ವಾದ ವಿಕೋಪಕ್ಕೆ ತೆರಳಿದ ನಂತರ ಬೆಟ್ಟದಿಂದ ಕೆಳಗೆ ತಳ್ಳಿರುವುದಾಗಿ ಆರೋಪಿ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ