ಹೈದ್ರಾಬಾದ್`ನಲ್ಲಿ ಭೀಕರ ಅಪಘಾತ: ಸಚಿವರ ಪುತ್ರ ಸೇರಿ ಇಬ್ಬರ ಸಾವು

ಬುಧವಾರ, 10 ಮೇ 2017 (10:54 IST)
ಹೈದ್ರಾಬಾದ್`ನಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಅಪಘಾತದಲ್ಲಿ ಆಂಧ್ರಪ್ರದೇಶದ ಹಿರಿಯ ಸಚಿವರೊಬ್ಬರ ಪುತ್ರ ದುರ್ಮರಣಕ್ಕೀಡಾಗಿದ್ದಾನೆ. ಆಂಧ್ರದ ಪಾಲಿಕೆ ಆಡಳಿತ ಸಚಿವ ಪಿ. ನಾರಾಯಣ ಪುತ್ರ 22 ವರ್ಷದ ಪಿ. ನಿಶಿತ್ ಸಾವಿಗೀಡಾಗಿದ್ದಾರೆ.
 

ಕಳೆದ ರಾತ್ರಿ ಹೈದ್ರಾಬಾದ್`ನಲ್ಲಿ ಭಾರೀ ಮಳೆ ಸುರಿದಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿರುವಾಗ ರಸ್ತೆಯಲ್ಲಿ ನೀರು ತುಂಬಿದ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ರೈಲು ಲಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಇದೇ ಸಂದರ್ಭ ವಿದ್ಯುತ್ ಕಂಬ ಉರುಳಿದ್ದರಿಂದ ಇಡೀ ಪ್ರದೇಶದಲ್ಲಿ ಪವರ್ ಕಟ್ ಆಗಿ ಕಗ್ಗತ್ತಲು ಆವರಿಸಿತ್ತು. ಅಪಘಾತಕ್ಕು ಮುನ್ನ ನಿಶಿತ್ ಮದ್ಯಪಾನ ಮಾಡಿದ್ದರೇ ಎಂಬ ಬಗ್ಗೆ ಪೋಸ್ಟ್ ಮಾರ್ಟಮ್ ವರದಿ ಬಳಿಕವೇ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಬಿಲಿ ಹಿಲ್ಸ್ ಪೊಲೀಸರು ಹೇಳುವ ಪ್ರಕಾರ, ನಿಶಿತ್ ಮತ್ತವನ ಸ್ನೇಹಿತ ರಾಜಾ ರವಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ