ನದಿಗಳ ಪುನಶ್ಚೇತನಕ್ಕೆ ಇಶಾ ಫೌಂಡೇಶನ್ನಿನಿಂದ ರಾಷ್ಟ್ರವ್ಯಾಪಿ ಬೃಹತ್ ಅಭಿಯಾನ

ಬುಧವಾರ, 16 ಆಗಸ್ಟ್ 2017 (20:21 IST)
ದೇಶಾದ್ಯಂತ ವೇಗವಾಗಿ ಕ್ಷೀಣಿಸುತ್ತಿರುವ ನದಿಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕೊಯಮತ್ತೂರಿನ ಇಶಾ ಫೌಂಡೇಶನ್ ರಾಷ್ಟ್ರವ್ಯಾಪಿ #RallyForRivers ಎಂಬ ಬೃಹತ್ ಚಳುವಳಿ ನಡೆಸಲು ಮುಂದಾಗಿದೆ. ಸೆಪ್ಟೆಂಬರ್ 3ರಂದು ಕೊಯಮತ್ತೂರಿನಲ್ಲಿ ರ್ಯಾಲಿಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ 2ರಂದು ನವದೆಹಲಿಯಲ್ಲಿ ಸಮಾರೋಪಗೊಳ್ಳಲಿದೆ.

ಇದು ಪ್ರತಿಭಟನೆ ಅಲ್ಲ. ಇದು ಆಂದೋಲನವಲ್ಲ. ನಮ್ಮ ನದಿಗಳು ನಶಿಸಿ ಹೋಗುತ್ತಿವೆ ಎಂಬ ಅರಿವು ಮೂಡಿಸಲು ಒಂದು ಅಭಿಯಾನವಾಗಿದೆ. ನೀರನ್ನು ಬಳಸಿಕೊಳ್ಳುವ ಪ್ರತಿಯೊಬ್ಬರೂ ನದಿಗಳ ಉಳಿವಿಗಾಗಿ ನಡೆಯುತ್ತಿರುವ ಈ ಚಳುವಳಿಯಲ್ಲಿ ಭಾಗವಹಿಸಬೇಕು. ಭಾರತದ ನದಿಗಳನ್ನ ಪುರುಜ್ಜೀವನಗೊಳಿಸಬೇಕಾದ ತುರ್ತು ಕುರಿತಂತೆ ಅರಿವು ಮೂಡಿಸಲು ರಾಷ್ಟ್ರವ್ಯಾಪಿ  ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತಿರುವುದಾಗಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದಾರೆ.






ಇದು ದೇಶದ ಅತಿದೊಡ್ಡ ಸಾಮೂಹಿಕ ಜಾಗೃತಿ ಅಭಿಯಾನ ಎನ್ನಲಾಗುತ್ತಿದ್ದು, ಈ ಪ್ರಯುಕ್ತ ಸದ್ಗುರು  ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಸಂಚರಿಸಿ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸದ್ಹುರು 16 ರಾಜ್ಯಗಳಿಗೆ ಭೇಟಿ ನೀಡುತ್ತಾರೆ. ಈ ಅಭಿಯಾನ ಕೃಷಿ ಮತ್ತು ಅರಣ್ಯ ರಕ್ಷಣೆ ಬಗ್ಗೆಯೂ ಅರಿವು ಮೂಡಿಸಲಿದೆ. 13 ರಾಜ್ಯಗಳ ಮುಖ್ಯಮಂತ್ರಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಸಮಾವೇಶದಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ.

ಸೆಪ್ಟೆಂಬರ್ 3ರಂದು ಕೊಯಮತ್ತೂರಿನಲ್ಲಿ ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ರ್ಯಾಲಿಗೆ ಚಾಲನೆ ನೀಡಲಿದ್ದು, ಅಕ್ಟೋಬರ್ 2ರಂದು ನವದೆಹಲಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಕಾರ್ಯಕ್ರಮದಲ್ಲಿ ಸಮಾರೋಪಗೊಳ್ಳಲಿದೆ.

ಇಶಾ ಫೌಂಡೇಶನ್ ಸಹಯೋಗದೊಂದಿಗೆ ಮಧ್ಯಪ್ರದೇಶ ಸರ್ಕಾರ ನರ್ಮದಾ ನದಿಯ ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ. ಮರಗಳನ್ನ ನೆಡುವ ಮತ್ತು ನದಿಗಳ ಉಳಿವಿನ ಬಗ್ಗೆ  ಅರಿವು ಮೂಡಿಸಲು ದೊಡ್ಡ ಚಳುವಳಿ ಆರಂಭಿಸಿದೆ. ಮಹಾರಾಷ್ಟ್ರ ಸರ್ಕಾರವೂ ಸಹ  ಗೋದಾವರಿ ನದಿಯ ಪುನಶ್ಚೇತನಗೊಳಿಸುವುದಕ್ಕೆ ಮತ್ತು 50 ಕೋಟಿ ಮರಗಳ ನೆಡುತೋಪು ಮಾಡಲು ಮಹಾರಾಷ್ಟ್ರದ ಸರ್ಕಾರದೊಂದಿಗೆ ಇಶಾ ಫೌಂಡೇಶನ್ ಜ್ಞಾಪನಾ ಪತ್ರವೊಂದಕ್ಕೆ ಸಹಿ ಹಾಕಿದೆ.

ಇಶಾ ಫೌಂಡೇಶನ್ ನಡೆಸುತ್ತಿರುವ ನದಿಗಳ ಪುನಶ್ಚೇತನ ಕುರಿತಾದ ಈ ಜಾಗೃತಿ ಅಭಿಯಾನಕ್ಕೆ (8000980009) ಟೋನ್ ಫ್ರೀ ನಂಬರ್`ಗೆ ಉಚಿತ ಮಿಸ್ ಕೊಟ್ಟು ಕೊಟ್ಟು ಬೆಂಬಲ ವ್ಯಕ್ತಪಡಿಸಬಹುದಾಗಿದೆ. ಈ ಅಭಿಯಾನದಲ್ಲಿ ದೇಶಾದ್ಯಂತ ಅಪಾರ ಪ್ರಮಾಣದ ಯುವ ಪಡೆ ಭಾಗವಹಿಸುತ್ತಿದೆ. ಸ್ವಯಂಪ್ರೇರಿತರು, ಪಂಚಾಯ್ತಿ ಸದಸ್ಯರು ಹೀಗೆ ವಿವಿಧ ಕ್ಷೇತ್ರಗಳ ಜನರು ಭಾಗವಹಿಸುತ್ತಿದ್ದಾರೆ. ಈ ಚಳುವಳಿಯ ಭಾಗವಾಗಿ ಸಮಾಜದ ಎಲ್ಲ ವಲಯಗಳನ್ನ ತಲುಪಲು ಆನ್`ಲೈನ್ ಮತ್ತು ಆಫ್`ಲೈನ್`ನಲ್ಲಿ 21 ಪ್ರಮುಖ ಕಾರ್ಯಕ್ರಮಗಳು ಮತ್ತು ಹತ್ತು ಹಲವು ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆಯಲಿವೆ. ನದಿಗಳಿಗಾಗಿ ನಡೆಯುತ್ತಿರುವ ರ್ಯಾಲಿ ಫಾರ್ ರಿವರ್ಸ್ ಅಭಿಯಾನದ ಭಾಗವಾಗಿ ಶೇಖರ್ ಕಪೂರ್, ರಾಕೇಶ್ ಓಂಪ್ರಕಾಶ್ ಮೆಹ್ರಾ, ಪ್ರಹ್ಲಾದ್ ಕಕ್ಕಾರ್ ನೇತೃತ್ವದಲ್ಲಿ ದೇಶಾದ್ಯಂತ ಕಿರುಚಿತ್ರ ಸ್ಪರ್ಧೆ ಸಹ ಆರಂಭಿಸಲಾಗಿದೆ. ವೃತ್ತಿಪರರು, ಯುವ ಕಲಾವಿದರು ನದಿ ಉಳಿವಿನ ಜಾಗೃತಿ ವಿಡಿಯೋಗಳನ್ನ ಅಪ್ಲೋಡ್ ಮಾಡಬಹುದಾಗಿದೆ.

ಶಾಲಾ ಮಕ್ಕಳಿಗೆ ಅರಿವು ಮುಡಿಸುವ ದೃಷ್ಟಿಯಿಂದ ಸೃಜನಶೀಲ ಬರವಣಿಗೆ, ಕಲಾ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ದೇಶಾದ್ಯಂತ 100,000 ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಬಿಎಸ್`ಎಫ್, ಕರ್ನಾಟಕ ಬ್ಯಾಂಕ್, ಇಫ್ಕೋ, ಐಆರ್ಸಿಟಿಸಿ, ರಿಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ, ವರ್ಲ್ಡ್ ಆಕ್ವಾ ಫೌಂಡೇಶನ್, ಮೈಕ್ರೋ ಫೇನಾನ್ಸ್ ಅಸೋಸಿಯೇಶನ್ಸ್, ಇಂಡಿಗೋ ಏರ್`ಲೈನ್ಸ್, ಡಿಎವಿ ಸ್ಕೂಲ್ಸ್, ಸಪ್ಇಕ್ ಮಕಾಯ್, ಎಜುಕಾಂಪ್ ಸಲ್ಯೂಶನ್ಸ್ 30 ಕಾರ್ಪೊರೇಟ್ ಕಂಪನಿಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿವೆ. ಇಶಾ ಫೌಂಡೇಶನ್ನಿನ 6000 ಸ್ವಯಂ ಸೇವಕರು ಅಭಿಯಾನ ರೂಪಿಸುವಲ್ಲಿ ಕೆಲಸ ಮಾಡಿದ್ದಾರೆ.

ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಬಾಲಿವುಡ್, ಸ್ಯಾಂಡಲ್ ವುಡ್, ತೆಲುಗು, ತಮಿಳು ನಟರು, ಕ್ರಿಕೆಟಿಗರು, ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸದ್ಗುರು ಟ್ವೀಟ್ ರೀಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.,
ಬಾಲಿವುಡ್`ನ ಅನುಪಮ್ ಖೇರ್, ಜೂಹಿ ಚಾವ್ಲಾ, ರಿಷಿ ಕಪೂರ್, ಮಧು, ದಿಯಾ ಮಿರ್ಜಾ ಸೇರಿದಂತೆ ಹಲವರು, ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್,  ಮಲೆಯಾಳಿ ಸೂಪರ್ ಸ್ಟಾರ್ ಮೋಹನ್ ಲಾಲ್ ಬೆಂಬಲ ಸೂಚಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ