Lal Bahadur Shastri :ಲಾಲ್ ಬಹದ್ದೂರ್ ಶಾಸ್ತ್ರಿ ಕೊನೆಯ ಕ್ಷಣದ ಎರಡು ರಹಸ್ಯಗಳು ಇಂದಿಗೂ ಬಯಲಾಗಿಲ್ಲ

Krishnaveni K

ಬುಧವಾರ, 2 ಅಕ್ಟೋಬರ್ 2024 (09:07 IST)
Photo Credit: X
ನವದೆಹಲಿ: ಇಂದು ಮಹಾತ್ಮಾ ಗಾಂಧೀಜಿ ಮಾತ್ರವಲ್ಲ, ದೇಶ ಕಂಡ ಅಪ್ರತಿಮ ಪ್ರಧಾನ ಮಂತ್ರಿ, ಸರಳ, ಸಜ್ಜನಿಕೆಯ ಪ್ರತೀಕ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಹೌದು. ಅವರ ಸಾವು ಇಂದಿಗೂ ಭಾರತದ ಇತಿಹಾಸ ಪುಟದಲ್ಲಿ ರಹಸ್ಯವಾಗಿಯೇ ಉಳಿದಿದೆ.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಹುಟ್ಟಿದ್ದು 1904 ರ ಅಕ್ಟೋಬರ್ 2 ರಂದು. ಜವಹರಲಾಲ್ ನೆಹರೂ ತೀರಿಕೊಂಡ ಬಳಿಕ 1964 ರಲ್ಲಿ ಅವರು ಪ್ರಧಾನಿಯಾಗಿ ಅಧಿಕಾರಕ್ಕೇರಿದರು. ಅವರು ಪೂರ್ಣಾವಧಿ ಮಾಡಿರಲಿಲ್ಲ. ಅವರು ತೀರಿಕೊಂಡಿದ್ದು 1966 ಜನವರಿ 11 ರಂದು. ಅದೂ ವಿದೇಶ ಪ್ರವಾಸದಲ್ಲಿದ್ದಾಗ. ಅವರ ಸಾವು ಹೃದಯಾಘಾತದಿಂದ ಸಂಭವಿಸಿತ್ತು ಎಂದು ಹೇಳಲಾಗಿದೆಯಾದರೂ ಅದರ ಹಿಂದೆ ಇನ್ನೂ ಉತ್ತರ ಸಿಗದ ಅನೇಕ ಪ್ರಶ್ನೆಗಳಿವೆ.

ತಾಷ್ಕಂಟ್ ಒಪ್ಪಂದಕ್ಕೆ ಸಹಿ ಹಾಕಲು ಅಲ್ಲಿಗೆ ತೆರಳಿದ್ದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹೋಟೆಲ್ ಕೊಠಡಿಯಲ್ಲೇ ಸಾವನ್ನಪ್ಪಿದ್ದರು. ಅವರ ಸಾವು ಹೃದಯಾಘಾತದಿಂದ ಆಗಿತ್ತು ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಆದರೆ ಅವರ ಸಾವಿನ ಬಗ್ಗೆ ಇಂದಿಗೂ ಅನೇಕರಲ್ಲಿ ಸಂಶಯಗಳಿವೆ.

ಭಾರತ-ಪಾಕಿಸ್ತಾನ ನಡುವೆ ಯುದ್ಧದ ಬಳಿಕ ತಾಷ್ಕಂಟ್ ಒಪ್ಪಂದ ನಡೆಯಿತು. ಈ ಒಪ್ಪಂದದಲ್ಲಿ ಸಹಿ ಹಾಕಲು ಲಾಲ್ ಬಹದ್ದೂರ್ ಶಾಸ್ತ್ರಿ ತಾಷ್ಕಂಟ್ ಗೆ ತೆರಳಿದ್ದರು. ಒಪ್ಪಂದದ ಬಳಿಕ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಬಳಿಕ ತಮ್ಮ ಹೋಟೆಲ್ ಕೊಠಡಿಗೆ ಮರಳಿದ್ದ ಅವರು ಪತ್ನಿಗೆ ಕರೆ ಮಾಡಿ ಮಕ್ಕಳ ಜೊತೆಯೂ ಮಾತನಾಡಿದ್ದರು.

ಮರುದಿನ ತಾಷ್ಕಂಟ್ ಒಪ್ಪಂದದ ಬಗ್ಗೆ ಭಾರತೀಯ ಮಾಧ್ಯಮಗಳ ಜೊತೆಗೂ ಮಾತನಾಡುವವರಿದ್ದರು. ಆದರೆ ಹೋಟೆಲ್ ಕೊಠಡಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಅವರು ಕುಸಿದು ಸಾವನ್ನಪ್ಪಿದರು. ಅವರ ಸಾವಿನ ಬಗ್ಗೆ ಇಂದಿಗೂ ಉತ್ತರ ಸಿಗದ ಎರಡು ಪ್ರಶ್ನೆಗಳಿವೆ.

ಈಗೆಲ್ಲಾ ಒಬ್ಬ ಸಾಮಾನ್ಯ ವ್ಯಕ್ತಿ ಸಾವನ್ನಪ್ಪಿದರೇ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಆದರೆ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಹಾಲಿ ಪ್ರಧಾನಿಯಾಗಿದ್ದರು. ಹಾಗಿದ್ದರೂ ಅವರ ಸಾವಿನ ಮರಣೋತ್ತರ ಪರೀಕ್ಷೆ ನಡೆದೇ ಇರಲಿಲ್ಲ. ಇನ್ನು, ಅವರ ದೇಹ ಕೊಂಚ ನೀಲಿ ಬಣ್ಣಕ್ಕೆ ತಿರುಗಿತ್ತು ಎಂಬ ಆರೋಪಗಳೂ ಇತ್ತು. ಹಾಗಿದ್ದರೆ ಅವರ ಸಾವು ಸಹಜವಲ್ಲವೇ ಎಂಬ ಅನುಮಾನ ಮೂಡಿಸುತ್ತದೆ. ಈ ಎರಡು ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ