ನವದೆಹಲಿ: 1975 ರ ತುರ್ತು ಪರಿಸ್ಥಿತಿ ಆಗಿ ಇಂದಿಗೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ಸಂವಿಧಾನಕ್ಕೆ ಏನಾದರೂ ಅಪಾಯವಿದೆ ಎಂದರೆ ಅದು ನಿಮ್ಮಿಂದ ಮಾತ್ರ ಮಿಸ್ಟರ್ ಮೋದಿ ಎಂದಿದ್ದಾರೆ.
ಬಿಜೆಪಿಯ ತುರ್ತು ಪರಿಸ್ಥಿತಿ ಕರಾಳ ದಿನದ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಇಂದು 11 ವರ್ಷದ ಅಘೋಷಿತ ತುರ್ತು ಪರಿಸ್ಥಿತಿ ಅಭಿಯಾನ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈವತ್ತಿನ ಸಂಕಷ್ಟದ ಪರಿಸ್ಥಿತಿಗೆ ಮತ್ತು ಸಂವಿಧಾನಕ್ಕೆ ಏನಾದರೂ ಅಪಾಯವಿದೆ ಎಂದಾದರೆ ಅದು ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ. ಈಗ ನಿಮ್ಮ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ ನಿಮಗಿದೆಯೇ? ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ವಿಪಕ್ಷಗಳ ನಾಯಕರನ್ನು, ಜನರನ್ನು ಜೈಲಿಗಟ್ಟಲಾಗುತ್ತದೆ.
ಸಹಿಷ್ಣುತೆ, ಭ್ರಾತೃತ್ವ, ಸ್ವಾತಂತ್ರ್ಯವನ್ನು ಅಳವಡಿಸಿಕೊಳ್ಳದ ಒಂದು ಸರ್ಕಾರ ನಮಗೆ ಪಾಠ ಮಾಡಲು ಬರಬಾರದು. ಸಂವಿಧಾನ ರಚನೆಯಲ್ಲಿ ಇವರ ಕೊಡುಗೆ ಏನೂ ಇಲ್ಲ. ಆದರೆ ಅದೇ ಜನರು ಈಗ ನಾವು ಸಂವಿಧಾನದ ರಕ್ಷಕರು ಎಂದು ಪೋಸ್ ಕೊಡುತ್ತಿದ್ದಾರೆ. ಅಂದಿನ ತುರ್ತು ಪರಿಸ್ಥಿತಿಯಿಂದ ದೇಶ ಯಾವತ್ತೋ ಹೊರಬಂದಿದೆ. ಸ್ವತಃ ಇಂದಿರಾ ಗಾಂಧಿಯವರೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಡಿದ್ದ ಸಾಂವಿಧಾನಿಕ ತಿದ್ದುಪಡಿಗಳನ್ನು ಹಿಂಪಡೆಯಲು ಮೊರಾರ್ಜಿ ದೇಸಾಯಿಯವರಿಗೆ ಬೆಂಬಲ ನೀಡಿದ್ದರು.
ಆದರೆ ಈಗಿನ ಕೇಂದ್ರ ಸರ್ಕಾರ ವಿಪಕ್ಷಗಳು ಆಡಳಿತವಿರುವ ರಾಜ್ಯಗಳ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಚುನಾವಣಾ ಆಯೋಗವೂ ಮೋದಿ ಸರ್ಕಾರದ ಕೈಗೊಂಬೆಯಾಗಿದೆ. ಇದಕ್ಕೆ ಮಹಾರಾಷ್ಟ್ರವೇ ಉದಾಹರಣೆಯಾಗಿದೆ. ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯದ ರಾಜ್ಯಪಾಲರುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ದೇಶದ ಸಂಪತ್ತನ್ನು ಕೆಲವೇ ಉದ್ಯಮಿಗಳ ಕೈಗೆ ಹಂಚಲಾಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ.
ಮೋದಿ ಹೆಸರಿಗೆ ಮಾತ್ರ ವಿಶ್ವಗುರು. ಆದರೆ ತನ್ನದೇ ದೇಶದ ಸಮಸ್ಯೆಯನ್ನು ಅವರಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ಹೆದರುವ ಇವರು ವಿಶ್ವ ಗುರು ಹೇಗಾಗುತ್ತಾರೆ? ಎಂದು ಖರ್ಗೆ ಲೇವಡಿ ಮಾಡಿದ್ದಾರೆ.