ನವದೆಹಲಿ: 1975 ರ ತುರ್ತು ಪರಿಸ್ಥಿತಿ ಘಟಿಸಿ ಇಂದಿಗೆ ಐದು ದಶಕಗಳಾಗಿವೆ. ಈ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ತುರ್ತು ಪರಿಸ್ಥಿತಿಯನ್ನು ಯಾವ ಭಾರತೀಯನೂ ಮರೆಯಲಾಗದು ಎಂದು ವಾಗ್ದಾಳಿ ನಡೆಸಿದ್ದಾರೆ.ತುರ್ತು ಪರಿಸ್ಥಿತಿಯಲ್ಲಿ ತಮ್ಮ ಅನುಭವವನ್ನು ಮೋದಿ ಒಂದು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ.
ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಿಕ ಅಧಿಕಾರಿಗಳಿಗೆ ಕತ್ತರಿ ಹಾಕಿ 50 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಇಂದು ಪ್ರಧಾನಿ ಮೋದಿ ಅಂದಿನ ಕರಾಳ ದಿನದ ಅನುಭವವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್ ದಟ್ ಫೋರ್ಜ್ಡ್ ಎ ಲೀಡರ್ ಎಂಬ ಪುಸ್ತಕವನ್ನು ಮೋದಿ ಬರೆದಿದ್ದು, ಇದನ್ನು ಬ್ಲೂ ಕ್ರಾಫ್ಟ್ ಫೌಂಡೇಷನ್ ಹೊರತರುತ್ತಿದೆ. ವಿಶೇಷವೆಂದರೆ ಕನ್ನಡಿಗರೇ ಆಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಗೃಹಸಚಿವ ಅಮಿತ್ ಶಾ ಇದನ್ನು ಇಂದು ಲೋಕಾರ್ಪಣೆಗೊಳಿಸುತ್ತಿದ್ದಾರೆ.
ಈ ಪುಸ್ತಕದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹತ್ತಾರು ವೇಷ ತೊಟ್ಟು ಓಡಾಡಿದ್ದನ್ನು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಆಗ ಅವರು ಆರ್ ಎಸ್ಎಸ್ ಕಾರ್ಯಕರ್ತರಾಗಿದ್ದರು. ಅಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ತಮ್ಮ ವಿರುದ್ಧ ಧ್ವನಿಯೆತ್ತಿದವರ ಹತ್ತಿಕ್ಕುವ ನಿರಂಕುಶ ಪ್ರಭುತ್ವ ಹೇರಿದ್ದರು. ಇದರ ವಿರುದ್ಧ ಹೋರಾಟದಲ್ಲಿ ಮೋದಿ ಕೂಡಾ ಪಾಲ್ಗೊಂಡಿದ್ದರು. ಈ ಚಳುವಳಿಯು ಒಬ್ಬ ನಾಯಕನಾಗಿ ತಮ್ಮನ್ನು ಹೇಗೆ ರೂಪಿಸಿತು ಎಂದು ಮೋದಿ ಬರೆದಿದ್ದಾರೆ.