ರಾಜಸ್ಥಾನ ರಾಜಕೀಯದಲ್ಲಿ ಸಂಚಲನ: ಕೃಷಿ ಸಚಿವ ಡಾ.ಕಿರೋಡಿಲಾಲ್​ ಮೀನಾ ರಾಜೀನಾಮೆ

Sampriya

ಗುರುವಾರ, 4 ಜುಲೈ 2024 (14:25 IST)
Photo Courtesy X
ಜೈಪುರ: ರಾಜಸ್ಥಾನದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯ ಕ್ಯಾಬಿನೆಟ್ ಸಚಿವ ಡಾ.ಕಿರೋಡಿಲಾಲ್ ಮೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದವು. ಇದೀಗ ಮೀನಾ ಅವರು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಭಜನ್ ಲಾಲ್ ಅವರಿಗೆ ಕಳುಹಿಸಿದ್ದಾರೆ.  

ಪೂರ್ವ ರಾಜಸ್ಥಾನಕ್ಕೆ ಸೇರಿದ ಮೀನಾ ಸಮುದಾಯದ ಹಿರಿಯ ನಾಯಕರಲ್ಲಿ ಡಾ. ಕಿರೋಡಿಲಾಲ್ ಮೀನಾ ಕೂಡ ಪ್ರಮುಖರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಚನೆಯಾದ ಬಿಜೆಪಿಯ ಭಜನ್ ಲಾಲ್ ಸರ್ಕಾರದಲ್ಲಿ ಅವರನ್ನು ಕೃಷಿ ಸಚಿವರನ್ನಾಗಿ ಮಾಡಲಾಯಿತು.

ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ತಮ್ಮ ಉಸ್ತುವಾರಿಯಲ್ಲಿರುವ ಏಳು ಸ್ಥಾನಗಳಲ್ಲಿ ಒಂದಾದರೂ ಬಿಜೆಪಿ ಸೋತರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯದ ದೌಸಾ, ಟೋಂಕ್-ಸವಾಯಿ ಮಾಧೋಪುರ್, ಭರತ್‌ಪುರ, ಭಿಲ್ವಾರಾ, ಕೋಟಾ-ಬುಂಡಿ, ಕರೌಲಿ-ಧೋಲ್‌ಪುರ್ ಮತ್ತು ಜೈಪುರ ಗ್ರಾಮಾಂತರ ಕ್ಷೇತ್ರಗಳು ಬಿಜೆಪಿ ನಾಯಕ ಕಿರೋಡಿ ಅವರ ಉಸ್ತುವಾರಿಯಲ್ಲಿದ್ದವು.

ಕಳೆದ ತಿಂಗಳು ಪ್ರಕಟವಾದ ಲೋಕಸಭೆಯ ಫಲಿತಾಂಶದಲ್ಲಿ ಬಿಜೆಪಿ 7 ರಲ್ಲಿ 4 ಸ್ಥಾನಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜೈಪುರ ಗ್ರಾಮಾಂತರ ಸಂಸದೀಯ ಸ್ಥಾನವನ್ನು ಬಿಜೆಪಿ ಕಠಿಣ ಹೋರಾಟದ ನಂತರ ಗೆಲ್ಲಲು ಸಾಧ್ಯವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ