ಇಂದು ಮುಸ್ಲಿಂ ಮಂಡಳಿ ಅರ್ಜಿ ವಿಚಾರಣೆ

ಗುರುವಾರ, 26 ಮೇ 2022 (07:23 IST)
ನವದೆಹಲಿ : ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಕೈಬಿಡುವಂತೆ ಹಾಗೂ ಸಿವಿಲ್ ನ್ಯಾಯಾಲಯ ನಿರ್ದೇಶನ ಮೇರೆಗೆ ನಡೆಸಲಾಗಿರುವ ವಿಡಿಯೋಗ್ರಫಿ ಸರ್ವೆಯನ್ನು ಅನೂರ್ಜಿತಗೊಳಿಸುವಂತೆ,
 
ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯನ್ನು ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಲಿದೆ. ನ್ಯಾ. ಅಜಯ್ ಕೃಷ್ಣ ವಿಶ್ವೇಶ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಎರಡು ದಿನಗಳ ಹಿಂದೆ ಮಧ್ಯಂತರ ಆದೇಶ ನೀಡಿದ್ದ ಕೋರ್ಟ್, ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯನ್ನು ಮೊದಲು ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. 

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಐದು ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಸೀದಿ ಆಡಳಿತ ಮಂಡಳಿ 1991 ರ ಪೂಜಾ ಸ್ಥಳಗಳ ನಿರ್ಬಂಧ ಕಾಯಿದೆ ಮತ್ತು ಆದೇಶ 7 ನಿಯಮ 11 ರ ಉಲ್ಲಂಘನೆಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು.

ನಿಯಮಗಳ ಪ್ರಕಾರ ಸ್ವಾತಂತ್ರ್ಯದ ನಂತರ ಧಾರ್ಮಿಕ ಪ್ರದೇಶಗಳ ರಚನೆ ಧಕ್ಕೆ ತರಬಾರದು ಮತ್ತು ಅದು ಇರುವ ಸ್ಥಿತಿಯಲ್ಲಿ ಮುಂದುವರಿಸಬೇಕು. ಆದರೆ ನಿಯಮ ಬಾಹಿರವಾಗಿ ಸಿವಿಲ್ ಕೋರ್ಟ್ ವಿಡಿಯೋ ಸರ್ವೆಗೆ ಅನುಮತಿ ನೀಡಿದೆ. ಹೀಗಾಗಿ ವೀಡಿಯೋ ಸರ್ವೆಯನ್ನು ಪರಿಗಣಿಸಬಾರದು ಮತ್ತು ಪೂಜೆಗೆ ಅವಕಾಶ ಕಲ್ಪಿಸಬಾರದು ಎಂದು ವಾದ ಮಂಡಿಸಿದ್ದರು.

ಅಲ್ಲದೇ ಪ್ರಕರಣದಲ್ಲಿ 1991 ರ ಕಾಯಿದೆ ಅನ್ವಯ ಆಗುವ ಬಗ್ಗೆ ಮೊದಲು ತೀರ್ಮಾನ ಆಗಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಒಪ್ಪಿರುವ ಕೋರ್ಟ್ ಇಂದಿನಿಂದ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ