ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆ ತೆರೆಯಲು ಚಿಂತನೆ: ಪ್ರಧಾನಿ ಮೋದಿ

ಬುಧವಾರ, 18 ಅಕ್ಟೋಬರ್ 2017 (13:17 IST)
ನವದೆಹಲಿ: ದೇಶದ ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆ ನಿರ್ಮಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಜತೆಗೆ ದೇಶದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಿಂದ ಸ್ಫೂರ್ತಿ ಪಡೆದು ಆರೋಗ್ಯ ಕ್ರಾಂತಿಗೆ ನಾಂದಿ ಹಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೆಹಲಿಯಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬಡವರಿಗೆ ಅಗ್ಗದ ದರದಲ್ಲಿ ಆರೋಗ್ಯ ಸೇವೆ ನೀಡುವುದಕ್ಕೆ ಕೇಂದ್ರ ಬದ್ಧವಾಗಿದೆ. ಆಯುರ್ವೇದ ಎನ್ನುವುದು ಭಾರತದ ಶಕ್ತಿ. ಹೀಗಾಗಿ, ತಜ್ಞರು ಅಲೋಪತಿಯಂತೆ ಬೇಗನೆ ರೋಗ ಶಮನವಾಗಬಲ್ಲಂತ, ಯಾವುದೇ ಅಡ್ಡ ಪರಿಣಾಮ ಬೀರದಂತಹ ಆಯುರ್ವೇದ ಔಷಧವನ್ನು ಅಭಿವೃದ್ಧಿಪಡಿಸಬೇಕು ಎಂದು ಮೋದಿ ಹೇಳಿದರು. ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಆಯುಷ್‌ ಸಚಿವಾಲಯ ಚಿಂತನೆ ನಡೆಸುತ್ತಿದೆ. 3 ವರ್ಷದಲ್ಲಿ 65 ಆಯುಷ್‌ ಆಸ್ಪತ್ರೆಗಳನ್ನು ತೆರೆಯಲಾಗಿದೆ ಎಂದರು.

30 ವರ್ಷದಲ್ಲಿ ಐಟಿ ಕ್ರಾಂತಿ ನೋಡಿದ್ದೇವೆ. ಈಗ ಆಯುರ್ವೇದದ ಮೂಲಕ ಆರೋಗ್ಯ ಕ್ರಾಂತಿಯಾಗಬೇಕು. ಆಯುರ್ವೇದವನ್ನು ಬಲಿಷ್ಠಗೊಳಿಸಲು ಹಾಗೂ ಪುನಶ್ಚೇತನಗೊಳಿಸಲು ನಾವೆಲ್ಲ ಶಪಥ ಮಾಡೋಣ ಎಂದರು.

ತಾಜ್‌ ಮಹಲ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆ ಇಲ್ಲದೆ ಹೋದರೆ, ಅಂತಹ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಪರಂಪರೆಯನ್ನು ಮರೆತರೆ ದೀರ್ಘ‌ಕಾಲದಲ್ಲಿ ಆ ದೇಶವು ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳಲಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ