ಗುಜರಾತ್ : ವರುಣನ ಅಬ್ಬರಕ್ಕೆ 67 ಮಂದಿ ಸಾವು, 7 ಸಾವಿರ ನಿರಾಶ್ರಿತರು

ಸೋಮವಾರ, 24 ಜುಲೈ 2017 (19:45 IST)
ಗುಜರಾತ್ ರಾಜ್ಯದ ವಲ್ಸದ್ ಜಿಲ್ಲೆಯ ಬನಸ್ಕಂದ, ಸಬರಕಂದ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಪ್ರಕೋಪ ಮೆರೆಮೀರುತ್ತಿರುವುದರಿಂದ ಎನ್‌ಡಿಆರ್‌ಎಫ್, ವಾಯುಸೇನೆ ಮತ್ತು ಇತರ ಪರಿಹಾರ ತಂಡಗಳು ನಗರದಲ್ಲಿ ಬೀಡು ಬಿಟ್ಟಿವೆ.
 
ಬನಸ್ಕಾಂದ್ ಜಿಲ್ಲೆಯಲ್ಲಿ ವಸತಿ ಪ್ರದೇಶಗಳು ನೀರಿನಲ್ಲಿ ಮುಳುಗುತ್ತಾ ಸಾಗಿವೆ. ಕಳೆದ ಎರಡು ದಿನಗಳಲ್ಲಿ ಎರಡೂ ಜಿಲ್ಲೆಗಳಲ್ಲಿ ಎಂಟು ಇಂಚುಗಳಷ್ಟು ಮಳೆಯಾಗಿದ್ದರಿಂದ, ಜಿಲ್ಲೆಯ ಕಾಲೋಲ್ ಗಾಂಧಿನಗರ, ದಿಯೋದರ್ ಪ್ರದೇಶಗಳಲ್ಲಿ ಪರಿಹಾರ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ಎರಡು ದಿನಗಳ ಅವಧಿಯಲ್ಲಿ ರಾಜ್ಯದಾದ್ಯಂತ 7 ಸಾವಿರ ಜನರನ್ನು ನಿರಾಶ್ರಿತರ ಶಿಬಿರಗಳಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
 
ಮುಖ್ಯಮಂತ್ರಿ ವಿಜಯ್ ರೂಪಾನಿ, ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಿದ್ದು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ವಾಯುಸೇನೆಯ ವಿಮಾನದಲ್ಲಿ ಸುರೇಂದರ್ ನಗರ್ ಪ್ರದೇಶವನ್ನು ವೀಕ್ಷಿಸಿದ ಅವರು ಜನತೆಗೆ ಅಗತ್ಯವಾದ ನೆರವು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.    
 
ಏತನ್ಮಧ್ಯೆ, ಗುಜರಾತ್‌ನ ಉತ್ತರ ಮತ್ತು ಮಧ್ಯ ಗುಜರಾತ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಕಟ್ಟೆಚ್ಚರ ವಹಿಸುವಂತೆ ಸರಕಾರ, ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ