ಸೀಮಿತ ದಾಳಿ ಆದೇಶಕ್ಕೆ ಆರೆಸ್ಸೆಸ್ ಸಿದ್ಧಾಂತವೇ ಕಾರಣ: ಮನೋಹರ್ ಪರಿಕ್ಕರ್

ಮಂಗಳವಾರ, 18 ಅಕ್ಟೋಬರ್ 2016 (14:24 IST)
ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ನಡೆಸಿದ ಸೀಮಿತ ದಾಳಿಗೆ ತಮಗೆ ಮತ್ತು ಪ್ರಧಾನಿ ಮೋದಿಯವರಿಗೆ ಆರೆಸ್ಸೆಸ್ ಸಿದ್ಧಾಂತವೇ ಪ್ರೇರಣೆಯಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
 
ಪ್ರಧಾನಿ ಮೋದಿ ಮಹಾತ್ಮಾ ಗಾಂಧಿ ಜನ್ಮಸ್ಥಳದಿಂದ ಬಂದವರು. ನಾನು ಗೋವಾದಿಂದ ಬಂದವನು. ಇಬ್ಬರು ಆರೆಸ್ಸೆಸ್ ಸಿದ್ದಾಂತವನ್ನು ಪಾಲಿಸುತ್ತಿರುವುದರಿಂದ ಸರ್ಜಿಕಲ್ ಸ್ಟ್ರೈಕ್‌ನಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
 
ನಿಮ್ಮ ಸೇನೆಯ ಬಗ್ಗೆ ತಿಳಿಯಿರಿ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಒಕೆಯಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸುವಂತೆ ಆದೇಶ ನೀಡುವ ಹಿಂದೆ ಆರೆಸ್ಸೆಸ್ ತರಬೇತಿಯ ಹಿನ್ನೆಲೆ ಅಡಗಿತ್ತು ಎಂದಿದ್ದಾರೆ. 
 
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ನಂತರ ಜನತೆ ನಾನು ಮತ್ತು ಮೋದಿಯವರು ಭಾರಿ ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು ಎಂದರು.
 
ಸೀಮಿತ ದಾಳಿ ನಡೆಸಿದ ನಂತರವೂ ಕೆಲವರಿಗೆ ಸಾಕ್ಷ್ಯಗಳು ಬೇಕಾಗಿದ್ದವು. ನಾವು ಎಂತಹ ಸಾಕ್ಷ್ಯ ಕೊಟ್ಟರೂ ಕೂಡಾ ಅವರು ನಂಬುವುದಿಲ್ಲ. ದೇಶದ ಸೇನೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ