ಸೀತಾರಾಮ್‌ ಯೆಚೂರಿ ಮೃತದೇಹ ಕೆಂಪು ಬಾವುಟದಲ್ಲಿ ಸುತ್ತಿ ಏಮ್ಸ್‌ಗೆ ಹಸ್ತಾಂತರ

Sampriya

ಭಾನುವಾರ, 15 ಸೆಪ್ಟಂಬರ್ 2024 (10:18 IST)
Photo Courtesy X
ನವದೆಹಲಿ: ಈಚೆಗೆ ನಿಧನರಾದ ಕಮ್ಯುನಿಸ್ಟ್‌ ನಾಯಕ ಸೀತಾರಾಮ್‌ ಯೆಚೂರಿ ಅವರ ಮೃತದೇಹವನ್ನು ಸಿಪಿಐ (ಎಂ) ಪಕ್ಷದ ಕೆಂಪು ಬಾವುಟದಲ್ಲಿ ಸುತ್ತಿ ಶನಿವಾರ ಇಲ್ಲಿನ ಏಮ್ಸ್‌ಗೆ ಹಸ್ತಾಂತರಿಸಲಾಯಿತು.

72 ವರ್ಷದ ಸಿಪಿಎಂನ ಹಿರಿಯ ನಾಯಕ ಸೀತಾರಾಮ್‌ ಯೆಚೂರಿ ಶ್ವಾಸಕೋಶದ ಸೋಂಕಿನಿಂದ ಗುರುವಾರ ನಿಧನರಾದರು. ದೆಹಲಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಚೇರಿಯಲ್ಲಿ ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೃತದೇಹ ಹಸ್ತಾಂತರದ ವೇಳೆ ಲಾಲ್‌ ಸಲಾಮ್‌ ಎನ್ನುವ ಘೋಷಣೆ ಮೊಳಗಿತು.

ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ಜೈರಾಮ್‌ ರಮೇಶ್‌, ರಾಜೀವ್‌ ಶುಕ್ಲಾ ಹಾಗೂ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಸಚಿನ್‌ ಪೈಲಟ್‌ ಸೇರಿದಂತೆ ಹಲವರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಚೀನಾದ ರಾಯಭಾರಿ ಕ್ಸು ಫೀಹಾಂಗ್, ವಿಯೆಟ್ನಾಂ ರಾಯಭಾರಿ ನ್ಗುಯೆನ್ ಥಾನ್ ಹೈ, ಪ್ಯಾಲೆಸ್ಟೀನ್‌ ರಾಯಭಾರಿ ಅದ್ನಾನ್ ಅಬು ಅಲ್ಹೈಜಾ, ನೇಪಾಳದ ಮಾಜಿ ಪ್ರಧಾನಿ ಮಾಧವ್ ಕುಮಾರ್ ನೇಪಾಳ, ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ವಜಾಹತ್ ಹಬೀಬುಲ್ಲಾ ಮತ್ತು ಇತಿಹಾಸಕಾರ ರೊಮಿಲಾ ಥಾಪರ್ ಕೂಡ ಯೆಚೂರಿ ಅವರ ಅಂತಿಮ ದರ್ಶನ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ