ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಜಯಾ

ಶುಕ್ರವಾರ, 4 ನವೆಂಬರ್ 2016 (09:32 IST)
ಕಳೆದ ಹಲವು ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಆರೋಗ್ಯಗಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು ಅವರನ್ನು ತುರ್ತು ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಲಾಗಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿದೆ.ಆದರೆ ಎಐಡಿಎಂಕೆಯಾಗಲಿ, ಆಸ್ಪತ್ರೆಯಾಗಲಿ ಯಾವುದೇ ಹೇಳಿಕೆ ನೀಡಿಲ್ಲ. 
ಜಯಲಲಿತಾ ದೀಪಾವಳಿಗೆ ಮನೆಗೆ ಹಿಂತಿರುಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರಿನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ.
 
ನವೆಂಬರ್ 19 ರಂದು ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜಯಾ ಸದ್ಯ ಮನೆ ಸೇರುವ ಸಾಧ್ಯತೆಗಳಿವೆ. 
 
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಆರೋಗ್ಯದಲ್ಲಿ ಗಣನೀಯ ಪ್ರಗತಿ ಕಂಡು ಬಂದಿದ್ದು  ಅವರು ಸಹಜ ಜೀವನ ಜೀವನ ನಡೆಸಲು ಪ್ರಾರಂಭಿಸಿದ್ದಾರೆ ಎಂದು ಎಐಡಿಎಂಕೆ ಬುಧವಾರ ಪ್ರಕಟನೆ ಹೊರಡಿಸಿತ್ತು.
 
ಜಯಲಲಿತಾ ಆರೋಗ್ಯವಾಗಿದ್ದಾರೆ, ಆದರೆ ಕೆಲ ದಿನ ಅವರನ್ನು ನಿಗಾವಣೆಯಲ್ಲಿ ಇಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 
ಸಹಜ ಜೀವನವನ್ನು ನಡೆಸಲು ಪ್ರಾರಂಭಿಸಿರುವ ಅವರು ಆದಷ್ಟು ಬೇಗ ಸಾರ್ವಜನಿಕ ಜೀವನಕ್ಕೆ ಮರಳಲಿದ್ದಾರೆ ಎಂದು ಪಕ್ಷದ ಮತ್ತೊಬ್ಬ ವಕ್ತಾರೆ ಸಿ.ಆರ್ ಸರಸ್ವತಿ ಹೇಳಿದ್ದರು. 
 
ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಜಯಾ ಅಪೋಲೋ ಆಸ್ಪತ್ರೆ ಸೇರಿದ್ದರು. ಬಳಿಕ ಅವರ ಶ್ವಾಸಕೋಶದ ಸೋಂಕಿಗಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಆದರೆ ಅವರ ಆರೋಗ್ಯದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಹೊರ ಹಾಕಿರಲಿಲ್ಲ. 

ದೆಹಲಿಯ ಏಮ್ಸ್ ಮತ್ತು ಲಂಡನ್‌ನ ನುರಿತ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ