ನಿಧಿಯಾಸೆಗೆ 14 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಬಲಿ ನೀಡಿದ ತಾಂತ್ರಿಕ

ಶನಿವಾರ, 10 ಜೂನ್ 2017 (18:52 IST)
ಕನೋಜ್‌ : ವೃತ್ತಿಯಲ್ಲಿ ಶಿಕ್ಷಕನಾಗಿರುವ ಮಾಂತ್ರಿಕನೋರ್ವ ನಿಧಿಯಾಸೆಗಾಗಿ 14  ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿ ಆಕೆಯನ್ನು ಬಲಿನೀಡಿರುವ ಅಮಾನುಷ ಘಟನೆ ಉತ್ತರಪ್ರದೇಶದ ಕನೋಜ್‌ ಜಿಲ್ಲೆಯ ಭಾದೌಸಿ ಗ್ರಾಮದಲ್ಲಿ ನಡೆದಿದೆ. 
 
ತನ್ನ ಮನೆ ಆವರಣದಲ್ಲಿ ನೆಲದಡಿ ಚಿನ್ನದ ನಿಧಿ ಇದೆ ಎಂದು ನಂಬಿದ್ದ ಚಿನ್ನದ ವ್ಯಾಪಾರಿ ಮಹಾವೀರ ಪ್ರಸಾದ್‌ (55) ಎಂಬಾತ ಆ ನಿಧಿಯನ್ನು ಪತ್ತೆಹಚ್ಚಿ  ಮೇಲಕ್ಕೆತಲು ಆರೋಪಿ ಮಾಂತ್ರಿಕ ಶರ್ಮಾನನ್ನು ಸಂಪರ್ಕಿಸಿದ್ದ. ಚಿನ್ನದ ನಿಧಿಯನ್ನು ಪಡೆಯಲು ನಿಮ್ಮ ಮಗಳನ್ನು ಬಲಿಕೊಡಬೇಕಾಗುವುದು, ಬಲಿಕೊಟ್ಟ ಸ್ವಲ್ಪ ಹೊತ್ತಿನ ಬಳಿಕ ನಿಮ್ಮ ಮಗಳು ಪುನಃ ಜೀವಂತವಾಗುತ್ತಾಳೆ  ಎಂದು ಮಹಾವೀರ ಪ್ರಸಾದ್‌ ಮತ್ತು ಆತನ ಪತ್ನಿ ಪುಷ್ಪಾ (50) ಳನ್ನು ಮಾಂತ್ರಿಕ ನಂಬಿಸಿದ್ದ. ಇದಕ್ಕೆ ದಂಪತಿ ಒಪ್ಪಿಗೆ ನೀಡಿತ್ತು. 
 
ಮಹಾವೀರ ದಂಪತಿಗೆ, ಪುತ್ರಿಯೊಂದಿಗೆ ಸ್ಥಳೀಯ ದೇವಸ್ಥಾನಕ್ಕೆ ಬರುವಂತೆ ಮಾಂತ್ರಿಕನು ಹೇಳಿದ್ದ. ಅದರಂತೆ ಮೂವರೂ ಅಲ್ಲಿಗೆ ಹೋಗಿದ್ದರು. ಆಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಹುಡುಗಿಯನ್ನು ಮಾಂತ್ರಿಕ ಶರ್ಮಾ, ಕೆಲವೊಂದು ಮಂತ್ರ-ತಂತ್ರಗಳ ವಿಧಿ ವಿಧಾನ ನಡೆಸಿ, ಬಳಿಕ ಸಮೀಪದ ಗದ್ದೆಯೊಂದಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ಕತ್ತು ಸೀಳಿ ಅಲ್ಲಿಂದ ಚಿಮ್ಮಿದ ರಕ್ತವನ್ನು ಪೂಜಾ ಸ್ಥಳಕ್ಕೆ ತಂದಿದ್ದ. ಆ ಬಳಿಕ ಅಲ್ಲಿಂದ ಪರಾರಿಯಾಗಿದ್ದ. 

ಮಗಳು ಮಾಂತ್ರಿಕನ ವಿಧಿ-ವಿಧಾನಗಳಲ್ಲಿ ಸತ್ತೇ ಹೋಗಿರುವುದು ಖಾತರಿಯಾದ ಕೂಡಲೇ ಮಹಾವೀರ ಪ್ರಸಾದ್‌  ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳನ್ನು ಮಾಂತ್ರಿಕನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಎಂದು ದೂರು ನೀಡಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಮಹಾವೀರ ಪ್ರಸಾದನ ಪುತ್ರಿ ಕವಿತಾಳ ಶವ ಹೊಲದಲ್ಲಿ ಸಿಕ್ಕಿತು. ಪರಾರಿಯಾಗಿರುವ ಮಾಂತ್ರಿಕನಿಗಾಗಿ ಪೊಲೀಸರೀಗ ಹುಡುಕಾಟ ನಡೆಸುತ್ತಿದ್ದಾರೆ.
 
 

ವೆಬ್ದುನಿಯಾವನ್ನು ಓದಿ